ಬೆಳ್ತಂಗಡಿ: ಮಾರ್ಚ್ 5 ರಂದು ವೇಣೂರಿನ ಪೆರ್ಮುಡ ಸೂರ್ಯ – ಚಂದ್ರ ಕಂಬಳವು ಈ ಬಾರಿಯೂ ಯಶಸ್ವಿಯಾಗಿ ನಡೆಯಲಿದೆ. ವೇಣೂರು ಕಂಬಳ ಸಮಿತಿಯ ನೂತನ ಅಧ್ಯಕ್ಷ ಹಾಗೂ ಶಾಸಕ ಹರೀಶ್ ಪೂಂಜ ಈ ವರುಷವೂ ಕಂಬಳ ಸುಸೂತ್ರವಾಗಿ ನಡೆಯುವಂತೆ ಕಂಬಳ ಕರೆ ನಡೆಯುವ ಸ್ಥಳದ ಮಾಲಕರು ಅನುಮತಿಯನ್ನು ನೀಡಿದ್ದಾರೆ ಎಂದು ತಿಳಿಸಿದರು.
ವೇಣೂರು ಪೆರ್ಮುಡ ಸೂರ್ಯ – ಚಂದ್ರ ಕಂಬಳದ ನಡೆಯುವ ಜಾಗದ ಒಂದು ಕರೆ ಗೋವಿಂದ ಭಟ್ ಎಂಬವರ ಖಾಸಗಿ ಜಮೀನಾಗಿರುತ್ತದೆ . ಈ ಜಮೀನಿನಲ್ಲಿ ಅವರ ಅನುಮತಿಯ ಮೇರೆಗೆ ಇಷ್ಟು ವರ್ಷಗಳ ಕಾಲ ಕಂಬಳ ಸಮಿತಿ ಕಂಬಳವನ್ನು ನಡೆಸಿಕೊಂಡು ಬರುತ್ತಿತ್ತು. ಆದರೆ ಕಳೆದ ವರ್ಷ ಹಾಗೂ ಅದರ ಹಿಂದಿನ ವರ್ಷ ಗೋವಿಂದ ಭಟ್ರು ಕಂಬಳ ನಡೆಯುವ ಜಾಗವನ್ನು ಅತಿಕ್ರಮಣ ಮಾಡಿದ್ದು , ಆ ಜಾಗವನ್ನು ತನಗೆ ಬಿಟ್ಟುಕೊಡಬೇಕು ಎಂದು ಆಗ್ರಹಿಸಿ ಕೋರ್ಟಿಗೆ ದಾವೆಯನ್ನು ಹೂಡಿದ್ದರು. ಕೋರ್ಟಿಗೆ ದಾವೆ ಹೂಡಿದ್ದಂತಹ ಸಂದರ್ಭದಲ್ಲಿ ಪ್ರತೀ ವರ್ಷ ಕಂ ಸಮಿತಿಯವರು ಅವರ ಬಳಿಗೆ ಹೋಗಿ ಕಂಬಳ ನಡೆಸಲು ಅವರ ಅನುಮತಿಯನ್ನು ಪಡೆದು ಕಂಬಳವನ್ನು ನಡೆಸಿಕೊಂಡು ಬರುವ ಪರಿಪಾಠ ನಡೆದುಕೊಂಡು ಬರುತ್ತಿತ್ತು ಎಂದು ಇಂದು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಹೇಳಿದರು.
ಕಳೆದ ವರ್ಷ ಗೋವಿಂದ ಭಟ್ರು ಕಂಬಳವನ್ನು ನಡೆಸಲು ಅನುಮತಿಯನ್ನು ನೀಡದೆ ತನ್ನ ಖಾಸಗಿ ಜಮೀನಿನ ಸುತ್ತ ಬೇಲಿಯನ್ನೂ ಸಹ ನಿರ್ಮಿಸಿದ್ದರು. ಬೇಲಿ ಹಾಕಿದ ನಂತರ ಕಂಬಳ ಸಮಿತಿಯವರು ಮತ್ತೆ ಅವರಲ್ಲಿ ವಿನಂತಿಸಿದ ಸಂದರ್ಭದಲ್ಲಿ , ಈ ವರ್ಷ ಕೊನೆಯದಾಗಿ ಕಂಬಳ ನಡೆಸುತ್ತಿರುವುದಾಗಿ ಹೇಳಿ ಇನ್ನು ಮುಂದಕ್ಕೆ ಹೊಸದಾಗಿ ಬೇರೆಯೇ ಕಂಬಳ ಕರೆಯನ್ನು ನಿರ್ಮಿಸಿ ಕಂಬಳ ನಡೆಸುವುದಾಗಿ ಬರವಣಿಗೆಯ ರೂಪದಲ್ಲಿ ಸ್ಥಳದ ಮಾಲಕರು ಹಾಗೂ ಕೋರ್ಟಿಗೆ ಬರೆದುಕೊಟ್ಟಿದ್ದರು .
ಹಾಗಾಗಿ ಕಳೆದ ವರ್ಷ ಕೊನೆಯ ಬಾರಿಗೆ ಕಂಬಳ ನಡೆಸಲು ಅವಕಾಶ ನೀಡಿ , ಈ ಬಾರಿ ಕಂಬಳವನ್ನು ನಡೆಸಲು ಅವಕಾಶ ನೀಡುವುದಿಲ್ಲವೆಂದು ಗೋವಿಂದ ಭಟ್ಟರು ಸ್ಪಷ್ಟವಾಗಿ ತಿಳಿಸಿದ್ದರು. ಈ ವರ್ಷವೂ ಅದೇ ಕರೆಯಲ್ಲಿ ಕಂಬಳವನ್ನು ನಡೆಸಲು ಊರಿನವರು ಸೇರಿ ಅನುಮತಿ ಕೇಳಿದ್ದ ಸಂದರ್ಭದಲ್ಲಿಯೂ ಸ್ಥಳದ ಮಾಲಕರು ನಿರಾಕರಿಸಿದ್ದರು. ಬಳಿಕ ಕ್ಷೇತ್ರದ ಶಾಸಕರು ಗೋವಿಂದ ಭಟ್ಟರಲ್ಲಿ ಈ ವರ್ಷ ಒಂದು ಬಾರಿ ಕಂಬಳ ನಡೆಸಲು ಅವಕಾಶ ನೀಡುವಂತೆ ವಿನಂತಿ ಮಾಡಿದ ಸಂದರ್ಭದಲ್ಲಿ ಅವರು ಈ ವರ್ಷವೂ ಅದೇ ಸ್ಥಳದಲ್ಲಿ ಕಂಬಳ ನಡೆಸಲು ಅನುಮತಿ ನೀಡಿ , ನಮಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಗೋವಿಂದ ಭಟ್ರ ನೇತೃತ್ವದಲ್ಲಿಯೇ ಕಳೆದ ಬಾರಿ ಇದ್ದ ಕಂಬಳ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಮುಂಚಿತವಾಗಿ ತಿಳಿಸಿಯೇ ಈ ಬಾರಿಯ ಕಂಬಳ ಪದಾಧಿಕಾರಿಗಳನ್ನು ಸಮಿತಿಗೆ ನೂತನ ಆಯ್ಕೆಮಾಡುವ ಬಗ್ಗೆ ಡಿ .18 ರಂದು ಪೂರ್ವಭಾವಿ ಸಭೆಯನ್ನು ನಡೆಸಲಾಗಿತ್ತು . ಈ ಬಗ್ಗೆ ಯಾವುದೇ ಗೊಂದಲಗಳಿಲ್ಲ . ಸಭೆಯಲ್ಲಿ ಎಲ್ಲರ ಅನುಮತಿಯನ್ನು ಪಡೆದು ಈ ಬಾರಿಯ ಪೆರ್ಮುಡ ಸೂರ್ಯ – ಚಂದ್ರ ಕಂಬಳ ಸಮಿತಿಯ ನೂತನ ಅಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ , ಕಾರ್ಯಾಧ್ಯಕ್ಷರಾಗಿ ಕುಕ್ಕೇಡಿ ಗ್ರಾ.ಪಂ ಅಧ್ಯಕ್ಷ ಜನಾರ್ದನ ಪೂಜಾರಿ , ಪ್ರಧಾನ ಕಾರ್ಯದರ್ಶಿಯಾಗಿ ಕಾರ್ತಿಕ್ , ಗೌರವಾಧ್ಯಕ್ಷರುಗಳಾಗಿ ಮಾಜಿ ಶಾಸಕ ಕೆ . ವಸಂತ ಬಂಗೇರ , ವಿಧಾನ ಪರಿಷತ್ ಶಾಸಕರುಗಳಾದ ಕೆ.ಹರೀಶ್ ಕುಮಾರ್ , ಕೆ ಪ್ರತಾಪ್ ಸಿಂಹ ನಾಯಕ್ , ಸ್ಥಳದ ಮಾಲಕ ಗೋವಿಂದ ಭಟ್ , ಜಯಂತ್ ಕೋಟ್ಯಾನ್ ಮೊದಲಾದವರು ಹಾಗೂ ಕುಡಿ , ನಿಟ್ಟಡೆ , ನಾಲ್ಕೂರು , ಬಳೆಂಜ , ಗರ್ಡಾಡಿ , ಪಡಂಗಡಿ , ವೇಣೂರು , ಕರಿಮಣೇಲು , ಮೂಡುಕೋಡಿ , ಬಜಿರೆ ಗ್ರಾಮಗಳನ್ನೊಳಗೊಂಡಂತ ಸಮಿತಿಯಲ್ಲಿ ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುವಂತಹ ಒಂದು ತಂಡವನ್ನು ರಚಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಇನ್ನು ಮುಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸರಕಾರದ ಮೂಲಕ ಯುವಜನ ಕ್ರೀಡಾ ಇಲಾಖೆಯ ಸಹಕಾರದಿಂದ ಬೆಳ್ತಂಗಡಿ ತಾಲೂಕಿನಲ್ಲಿ ಅತ್ಯಾಧುನಿಕವಾಗಿರುವಂತಹ , ಒಂದು ಸುಸಜ್ಜಿತ ಕಂಬಳ ಕರೆ ನಿರ್ಮಾಣಗೊಳಿಸಿ , ಅದಕ್ಕೆ ಅವಶ್ಯಕವಾಗಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವುದೂ ಕೂಡ ನನ್ನ ಮುಂದಿನ ಕಲ್ಪನೆಯಾಗಿದೆ . ಈ ಬಾರಿ ವೇಣೂರು ಪೆರ್ಮುಡ ಸೂರ್ಯ – ಚಂದ್ರ ಕಂಬಳವನ್ನು ಯಶಸ್ವಿಯಾಗಿ ನಡೆಸಿಕೊಡುವುದು ನಮ್ಮ ಉದ್ದೇಶವಾಗಿದೆ ಎಂದರು . ನಾಳೆ ಗೋವಿಂದ ಭಟ್ರು ಬಂದು ಹಳೆಯ ಕಂಬಳ ಸಮಿತಿಯವರು ಕಂಬಳ ನಡೆಸಲಿ ಎಂದು ಹೇಳಿದರೂ ನಮ್ಮಿಂದ ಯಾವುದೇ ಆಕ್ಷೇಪವಿಲ್ಲ. ಯಾರೇ ಕಂಬಳ ನಡೆಸಿದರೂ ನಮಗೆ ಬೇಸರವಿಲ್ಲ. ಆದರೆ ಊರಿನ ಕಂಬಳ ನಿಲ್ಲದೆ ಈ ಬಾರಿಯೂ ನಡೆಯಲಿ ಎಂಬುವುದು ಮಾತ್ರ ನಮ್ಮ ಸ್ಪಷ್ಟ ಉದ್ದೇಶವಾಗಿದೆ . ಎಂದು ಈ ಸಂದರ್ಭದಲ್ಲಿ ಶಾಸಕರು ಹೇಳಿದರು.
ಇಂದಿನ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಹಾಗೂ ಕಂಬಳ ಸಮಿತಿ ಗೌರವಾಧ್ಯಕ್ಷ ಜಯಂತ್ ಕೋಟ್ಯಾನ್ , ಕುಕ್ಕೇಡಿ ಗ್ರಾ.ಪಂ ಅಧ್ಯಕ್ಷ ಹಾಗೂ ಕಂಬಳ ಸಮಿತಿ ನೂತನ ಅಧ್ಯಕ್ಷ ಜನಾರ್ದನ ಪೂಜಾರಿ , ಪ್ರಧಾನ ಕಾರ್ಯದರ್ಶಿಯಾಗಿ ಕಾರ್ತಿಕ್ ಮೊದಲಾದವರು ಉಪಸ್ಥಿತರಿದ್ದರು.