ಲಖನೌ: ಬಾವಿಗೆ ಬಿದ್ದ ಕರುವನ್ನು ರಕ್ಷಿಸಲು ಹೀಗಿ ಒಂದೇ ಕುಟುಂಬದ ನಾಲ್ವರು ಸೇರಿ ಐವರು ಸಾವನ್ನಪ್ಪಿದ ದಾರುಣ ಘಟನೆ ಉತ್ತರ ಪ್ರದೇಶದ ಗೋಂಡಾದ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಮಹಾರಾಜಗಂಜ್ ಪೊಲೀಸ್ ಔಟ್ಪೋಸ್ಟ್ ಬಳಿಯ ರಾಜಾ ಮೊಹಲ್ಲಾದಲ್ಲಿ ಘಟನೆ ನಡೆದಿದೆ.
ಕರುವನ್ನು ಯಶಸ್ವಿಯಾಗಿ ರಕ್ಷಿಸಲಾಗಿದ್ದರೂ, ಬಾವಿಗೆ ಇಳಿದ ಐವರು ವಿಷಕಾರಿ ಮೀಥೇನ್ ಅನಿಲ ಸೇವಿಸಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಮಹಾರಾಜ್ ಗಂಜ್ ಪ್ರದೇಶದ ವೈಭವ್ (18), ದಿನೇಶ್ ಅಕಾ ಚೋಟು (30), ರವಿಶಂಕರ್ ಅಕಾ ರಿಂಕು (36) ಮತ್ತು ವಿಷ್ಣು ದಯಾಳ್ (35) ಹಾಗೂ ಭಾಡು ತರ್ಹಾರ್ ಪ್ರದೇಶದ ಮನ್ನು ಸೈನಿ (35) ಎಂದು ಗುರುತಿಸಲಾಗಿದೆ.
ಪಾಳು ಬಿದ್ದಿದ್ದ ಬಾವಿಯಲ್ಲಿ ಕರು ಬಿದ್ದಿರುವುದನ್ನು ನೋಡಿ ವಿಷ್ಣು ಕರುವನ್ನು ರಕ್ಷಿಸಲು ಇಳಿದಿದ್ದಾನೆ. ಆತನಿಂದ ಆಗದಾಗ, ಆತನ ಸಹಾಯಕ್ಕೆ ವೈಭವ್ ಕೂಡ ಬಾವಿಗೆ ಇಳಿದಿದ್ದಾನೆ. ಅವರ ಸಹಾಯಕ್ಕೆ ದಿನೇಶ್ ಮತ್ತು ರವಿಶಂಕರ್ ಬಾವಿಗೆ ಇಳಿದಿದ್ದಾರೆ. ಕರುವನ್ನು ರಕ್ಷಿಸಲಾಯಿತು. ಆದರೆ, ನಾಲ್ವರು ಬಾವಿಯೊಳಗೆ ಸಿಕ್ಕಿಹಾಕಿಕೊಂಡರು. ಅವರ ಕೂಗು ಕೇಳಿ, ದಾರಿಯಲ್ಲಿ ಹೋಗುತ್ತಿದ್ದ ಸೈನಿ ಬಾವಿಗೆ ಇಳಿದಿದ್ದಾರೆ.
ಕೊನೆಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಎರಡು ಗಂಟೆಗಳ ಕಾರ್ಯಾಚರಣೆ ನಂತರ ಐವರ ಶವಗಳನ್ನು ಹೊರಗೆ ತೆಗೆಯಲು ಸಾಧ್ಯವಾಯಿತು.