ಉಪ್ಪಿನಂಗಡಿ : ಇಲ್ಲಿನ ಎಚ್.ಎಂ. ಆಡಿಟೋರಿಯಂ ಬಳಿಯಲ್ಲಿ ಗುರುವಾರ ರಾತ್ರಿ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದ್ದು, ಢಿಕ್ಕಿ ಹೊಡೆದ ಕಾರು ಪರಾರಿಯಾಗಿದೆ. ಮೃತನನ್ನ ಬಾರ್ಯ ಗ್ರಾಮದ ಬೇಂಗಿಲ ತುಂಬೆತ್ತಡ್ಕ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಮಹಮ್ಮದ್ ಆರಿಫ್ (23 ) ಎಂದು ಗುರುತಿಸಲಾಗಿದೆ.
ಇವರು ಉಪ್ಪಿನಂಗಡಿ ಕಡೆಯಿಂದ ಕರಾಯ ಕಡೆಗೆ ತನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಗುರುವಾಯನಕೆರೆ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕಾರು ಈತನ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ಪರಾರಿಯಾಗಿದೆ. ಈ ಸಂದರ್ಭ ರಸ್ತೆಗೆಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗೊಂಡ ಆರಿಫ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.
ಮಹಮ್ಮದ್ ಆರಿಫ್ ಸಾವಿನ ಗೆ ಸಂಬಂಧಿಸಿ ಆತ ಹಾಕಿಕೊಂಡಿದ್ದಾನೆ ಎಂದು ಹೇಳಲಾಗುತ್ತಿರುವ ಸ್ಟೇಟಸ್ ಕಣ್ಣೀರು ತರಿಸುವಂತಿದೆ. ವಿಧಿ ಆತನಿಗೆ ಸಾವಿನ ಮುನ್ಸೂಚನೆ ನೀಡಿತ್ತೇನೋ ಎಂಬಂತೆ ‘ಒಂದೊಂದು ಮರಣ ವಾರ್ತೆಯೂ ನಮ್ಮ ಮರಣವನ್ನು ನೆನಪಿಸುವ ಎಚ್ಚರಿಕೆ ಘಂಟೆಯಾಗಿದೆ. ಇರುವಷ್ಟು ದಿನ ಯಾರನ್ನು ಕೆಟ್ಟವರೆಂದು ದ್ವೇಷಿಸದೆ ಎಲ್ಲರ ಜೊತೆ ಪರಸ್ಪರ ಪ್ರೀತಿಸಿ” ಆತ ಬರೆದುಕೊಂಡಿದ್ದ.
