ಬೆಳ್ತಂಗಡಿ; ಉದ್ಯೋಗ ಕೊಡಿಸುವುದಾಗಿ ಹೇಳಿ ವ್ಯಕ್ತಿಗೆ ವಂಚನೆ ಮಾಡಿರುವ ಘಟನೆ ಉಜಿರೆಯಲ್ಲಿ ನಡೆದಿದೆ.ಉಜಿರೆ ಮಂಜುಶ್ರೀ ನಗರ ನಿವಾಸಿ ಕೊನ್ಸಟೆನಿ ಅಲ್ಪೋನ್ಸ್ ಕರ್ಡೋಜ್ (64 )ಎಂಬವರು ಈ ಹಿಂದೆ ವಿದೇಶದಲ್ಲಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಕಳೆದ ನಾಲ್ಕೂವರೆ ವರ್ಷದಿಂದ ಊರಿನಲ್ಲಿಯೇ ಇದ್ದಾರೆ. ಇವರು ಫೇಸ್ಬುಕ್ ನಲ್ಲಿ ದುಬೈ ಮೂಲದ AL Jaber ಕಂಪನಿಯಲ್ಲಿ ಉತ್ತಮ ಸಂಬಳದ ಉದ್ಯೋಗ ಅವಕಾಶ ಇದೆ ಎಂಬ ಪೋಸ್ಟ್ ಒಂದನ್ನು ನೋಡಿ ಅದನ್ನು ಸತ್ಯ ಎಂದು ನಂಬಿ, ಆ ಲಿಂಕ್ ಮೂಲಕ ಅಪರಿಚಿತ ಕಂಪನಿಯ HRA ಅಧಿಕಾರಿ ಎಂದು ನಂಬಿಸಿ, ನಂತರ ಪಿರ್ಯಾದುದಾರರು ಆತನ ಮೊಬೈಲ್ ನಂಬ್ರ ಪಡೆದುಕೊಂಡು, ಆತನೊಂದಿಗೆ ವಾಟ್ಸಾಪ್ ಮೂಲಕ ಸಂಪರ್ಕ ಬೆಳೆಸಿದ್ದಾರೆ.

ಈ ವೇಳೆ ಆತ ಪ್ರಾರಂಭಿಕ ಖರ್ಚು ಎಂದು ನಂಬಿಸಿ ಕೊನ್ಸಟೆನಿ ಅಲ್ಪೋನ್ಸ್ ಕರ್ಡೋಜ್ ಅವರಿಂದ ಆತನ ಬ್ಯಾಂಕ್ ಖಾತೆಗೆ ದಿನಾಂಕ: 24/07/2024 ರಿಂದ ದಿನಾಂಕ: 31/07/2024 ರವರೆಗೆ ಹಂತ ಹಂತವಾಗಿ ರೂ. 2,72,621/- ಮೊತ್ತ ನಗದನ್ನು ಆತನ ಖಾತೆಗೆ ವರ್ಗಾಯಿಸಿಕೊಂಡು, ಇನ್ನಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಆಗ ಕೊನ್ಸಟೆನಿ ಅಲ್ಪೋನ್ಸ್ ಕರ್ಡೋಜ್ ಅವರಿಗೆ ಮೋಸ ಹೋಗಿರುವ ಸಂಗತಿ ಗೊತ್ತಾಗಿದೆ. ಇದೀಗ ನಂಬಿಸಿ ಮೋಸ ಮಾಡಿದ ಅಪರಿಚಿತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಆಧಾರದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ಅ.ಕ್ರ. 77/2024 ಕಲಂ: 318(2), 318(4) ಭಾರತೀಯ ನ್ಯಾಯ ಸಂಹಿತೆ ಮತ್ತು 67(D) IT act ರಂತೆ ಪ್ರಕರಣ ದಾಖಲಾಗಿರುತ್ತದೆ.