ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳ ಸೇರಿದಂತೆ ಧಾರ್ಮಿಕ ಕೇಂದ್ರಗಳು ಸಮಾಜಕ್ಕೆ ಶಕ್ತಿ ಕೊಡುವ ಕೇಂದ್ರಗಳಾಗಿದೆ. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಜನಜಾಗೃತಿ ವೇದಿಕೆಯ ಕುಟುಂಬದ ಸದಸ್ಯನಾಗಿರುವುದು ನನಗೆ ದೇವರು ಕಲ್ಪಿಸಿದ ಭಾಗ್ಯ. ಇದೇ ಕುಟುಂಬದ ಸದಸ್ಯರಿಂದ ಇಂದು ನಾನು ಸನ್ಮಾನ ಸ್ವೀಕರಿಸುತ್ತಿರುವುದು ನನಗೆ ಮರೆಯಲಾಗದ ದಿನ ಎಂದು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ್ಸಿಂ ನಾಯಕ್ ಹೇಳಿದರು.
ಅವರು ಬುಧವಾರ ಉಜಿರೆ ಲಾಯಿಲ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಜಾಗೃತಿ ಸೌಧದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಕೆಲಸದಲ್ಲಿ ಬದ್ಧತೆ ಇರಬೇಕು, ಮೌಲ್ಯಗಳನ್ನು ಕಾಪಾಡಬೇಕು. ಟೀಕೆಗಳು ಬಂದಾಗ ತಾಳ್ಮೆ ಇರಬೇಕು. ಅಂತಹ ತಾಳ್ಮೆಯ ಮನೋಭಾವವನ್ನು ಭಗವಂತ ನೀಡಿದ್ದಾನೆ. ಸಣ್ಣ ವಿಷಯದಲ್ಲಿ ದಾರಿ ತಪ್ಪಿಸುವವರು ಹಲವರಿದ್ದಾರೆ ಆದರೆ ಸತ್ಯ, ಧರ್ಮ, ನ್ಯಾಯಕ್ಕೆ ಗೆಲುವು ನಿಶ್ಚಿತ ಎಂದರು.
ಅಭಿನಂದನಾ ಭಾಷಣ ಮಾಡಿದ ಧ.ಗ್ರಾಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಹೆಚ್.ಮಂಜುನಾಥ್ ಅವರು, ಧರ್ಮಾಧಿಕಾರಿ ಡಾ.ಹೆಗ್ಗಡೆಯವರ ಕಲ್ಪನೆಯಂತೆ ಮದ್ಯ ನಿಷೇಧಕ್ಕಾಗಿ ಜನಜಾಗೃತಿ ವೇದಿಕೆ ಆರಂಭವಾಯಿತು. ವೇದಿಕೆಯ ಹೋರಾಟದ ಫಲವಾಗಿ ಸಾರಾಯಿ ನಿಷೇಧವಾಯಿತು. ಬಳಿಕ ಕೆಲವೊಂದು ಘಟನೆಗಳಲ್ಲಿ ಸಮಾಲೋಚಿಸಿ ಮದ್ಯಪಾನಿಗಳ ಮನಃ ಪರಿವರ್ತನೆಗಾಗಿ ಮದ್ಯವರ್ಜನ ಶಿಬಿರಗಳ ಮೂಲಕ ಸಾವಿರಾರು ಕುಟುಂಬಗಳಿಗೆ ಬೆಳಕನ್ನು ನೀಡುವ ಕಾರ್ಯ ವೇದಿಕೆ ಮಾಡಿದೆ. ಇಂತಹ ವೇದಿಕೆಯಲ್ಲಿ ಸಮಾಜಸೇವೆಯನ್ನು ಮಾಡಿದವರು ಪ್ರತಾಪಸಿಂಹ ನಾಯಕರು. ಸರಳ, ಸಜ್ಜನಿಕೆಯ ವ್ಯಕ್ತಿಯಾದ ನಾಯಕರು ವೇದಿಕೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಶಕ್ತಿ ತುಂಬಿದೆ ಎಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಎಕಯ ಅಧ್ಯಕ್ಷ ವಿ ರಾಮಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ. ವಸಂತ ಸಾಲಿಯಾನ್ ಕಾಪಿನಡ್ಕ ಅವರನ್ನು ಅಭಿನಂದಿಸಲಾಯಿತು.ವಿವಿಧ ಗಣ್ಯರು ಪ್ರತಾಪ್ಸಿಂಹ ನಾಯಕ್ರವರನ್ನು ಅಭಿನಂದಿಸಿದರು.
ಜನ ಜಾಗೃತಿ ವೇದಿಕೆ ಮಾಜಿ ರಾಜ್ಯಾಧ್ಯಕ್ಷರಾದ ಸತೀಶ್ ಹೊನ್ನವಳ್ಳಿ, ದೇವದಾಸ್ ಹೆಬ್ಬಾರ್, ರಾಧಾಕೃಷ್ಣ ಆಳ್ವ, ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷೆ ಶಾರದಾ ಆರ್ ರೈ, ಯೋಜನೆಯ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್, ಜ್ಯೋತಿ ನಾಯಕ್ ಉಪಸ್ಥಿತರಿದ್ದರು.
ವೇದಿಕೆ ಟ್ರಸ್ಟ್ ಕಾರ್ಯದರ್ಶಿ ವಿವೇಕ್ ವಿ ಪಾಸ್ ಸ್ವಾಗತಿಸಿದರು. ವೇದಿಕೆಯ ಯೋಜನಾಧಿಕಾರಿ ಪಿ ಚೆನ್ನಪ್ಪ ಗೌಡ ವಂದಿಸಿದರು. ಗ್ರಾ.ಯೋಜನೆ ತಾಲೂಕು ಯೋಜನಾಧಿಕಾರಿ ಜಯಕರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.