ಉತ್ತರಕನ್ನಡ: ಪ್ರವಾಸಕ್ಕೆ ಬಂದಿದ್ದ ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿನಿಯರು ನೀರುಪಾಲಾದ ಘಟನೆ ಘಟನೆ ಗೋಕರ್ಣದ ಕುಡ್ಲೆ ಕಡಲ ತೀರದ ಜಟಾಯುತೀರ್ಥದ ಬಳಿ ಗುರುವಾರ ಸಂಜೆ ಸಂಭವಿಸಿದೆ.
ತಮಿಳುನಾಡು ತಿರುಚಿಯ ಎಸ್.ಆರ್.ಎಂ ಮೆಡಿಕಲ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿಯರಾದ ಕನ್ನಿಮೋಳಿ ಈಶ್ವರನ್(23) ಮತ್ತು ಹಿಂದುಜಾ ನಟರಾಜನ್ (23) ಮೃತ ವಿದ್ಯಾರ್ಥಿನಿಯರು.
ತಮಿಳುನಾಡು ತಿರುಚಿಯ ಎಸ್.ಆರ್.ಎಂ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಅಂತಿಮ ಪರೀಕ್ಷೆ ಬರೆದು ರಜೆಯ ಮೇಲೆ ತೆರಳಿದ್ದ 23 ಜನ ವಿದ್ಯಾರ್ಥಿನಿಯರ ತಂಡ ಚೆನ್ನೈನ ಬ್ರೆಟಿ ಟ್ರಾವೆಲ್ಸ್ ಮೂಲಕ ಧಾಂಡೇಲಿ, ಗೋಕರ್ಣ, ಮುರ್ಡೇಶ್ವರ ಪ್ರವಾಸಕ್ಕೆ ಆಗಮಿಸಿದ್ದು ದಾಂಡೇಲಿಯಿಂದ ಅಂಕೋಲಾ ತಲುಪಿ ವಿಭೂತಿ ಪಾಲ್ಸ್ ಗೆ ಹೋಗಿ ಸಂಜೆ ಗೋಕರ್ಣ ತಲುಪಿದ್ದರು. ವಿದ್ಯಾರ್ಥಿನಿಯರ ಜೊತೆಗೆ ಬಂದಿದ್ದ ಟ್ರಾವಲ್ ಸಂಸ್ಥೆಯ ಗೈಡ್ ಗಾಂಧಿ ಶಿವಕುಮಾರನ್ ಎನ್ನುವವರು ಸೂರ್ಯಾಸ್ತ ತೋರಿಸುವುದಾಗಿ ಹೇಳಿ ಕುಡ್ಲೆ ಕಡಲ ತೀರದ ಜಟಾಯು ತೀರ್ಥ ಪ್ರದೇಶಕ್ಕೆ ತೆರಳಿದ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಅಲೆಗಳ ಹೊಡೆತಕ್ಕೆ ಸಮುದ್ರಪಾಲಾಗಿದ್ದಾರೆ. ಸ್ಥಳೀಯ ಮಣಿರಾಜು ಎನ್ನುವವರು ರಕ್ಷಣೆಗೆ ಧಾವಿಸಿ ಸಮುದ್ರಕ್ಕೆ ಜಿಗಿದಿದ್ದು ಅಲೆಗಳ ತೀವ್ರತೆ ಹೆಚ್ಚಿದ ಕಾರಣ ಅವರು ಸಹ ಅಪಾಯಕ್ಕೆ ಸಿಲುಕಿದ್ದು ಕುಡ್ಲೆ ಬೀಚ್ ಬೋಟ್ ಮೂಲಕ ಸಾಗಿ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿದ್ಯಾರ್ಥಿನಿಯರ ಮೃತ ದೇಹಗಳನ್ನು ಮೇಲೆತ್ತಿ ತರಲಾಗಿದ್ದು ಗೋಕರ್ಣ ಪೊಲೀಸ್ ನಿರೀಕ್ಷಕ ಶ್ರೀಧರ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.