ಮಂಗಳೂರು: ಇಲ್ಲಿನ ಮಂಗಳೂರು ವಿ.ವಿ. ಘಟಕ ಕಾಲೇಜಿನಲ್ಲಿ ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ಶಿಸ್ತು ಉಲ್ಲಂಘಿಸಿದ ಕಾರಣಕ್ಕೆ ಪ್ರಾಂಶುಪಾಲರು ಮೂವರು ವಿದ್ಯಾರ್ಥಿನಿಯರಿಗೆ ನೋಟಿಸ್ ನೀಡಿದ್ದಾರೆ. ಅದರಂತೆ ಮೂವರು ವಿದ್ಯಾರ್ಥಿನಿಯರ ಪೈಕಿ ಇಬ್ಬರು ವಿದ್ಯಾರ್ಥಿನಿಯರು ಮಾತ್ರ ನೋಟಿಸ್ ಗೆ ಉತ್ತರ ನೀಡಿದ್ದಾರೆ.
ಇವರಲ್ಲಿ ಒಬ್ಬಾಕೆ ವಿದ್ಯಾರ್ಥಿನಿ ಶನಿವಾರ ತರಗತಿಗೆ ಹಾಜರಾಗಿದ್ದರೆ ಇನ್ನೊಬ್ಬಾಕೆ ತರಗತಿಗೆ ಬಂದಿಲ್ಲ. ಮತ್ತೊಬ್ಬಳು ನೋಟಿಸ್ಗೆ ಉತ್ತರಿಸಿಲ್ಲ. ಕಾಲೇಜಿನಲ್ಲಿ ಬಿಕಾಂ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನ ನಡೆಯುತ್ತಿದೆ.
ಹಾಗಾಗಿ ಪದವಿ ತರಗತಿಗಳನ್ನು ಸುಮಾರು 15 ದಿನಗಳ ಕಾಲ ಆನ್ಲೈನ್ನಲ್ಲಿ ನಡೆಸಲಾಗುತ್ತಿದೆ. ಸ್ನಾತಕೋತ್ತರ ಪದವಿ ತರಗತಿ ಮಾತ್ರ ಆಫ್ಲೈನ್ನಲ್ಲಿ ನಡೆಯುತ್ತಿದೆ. ಶನಿವಾರ ಅರ್ಧ ದಿನ ಮಾತ್ರ ತರಗತಿ ಇದ್ದು, ಸೋಮವಾರ ಕೂಡ ಉತ್ತರ ಪತ್ರಿಕೆ ಮೌಲ್ಯಮಾಪನ ಮುಂದುವರಿಯಲಿದೆ.
ಹೀಗಾಗಿ ಪದವಿ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ನಡೆಸಲಾಗುತ್ತಿದೆ ಎಂದು ಪ್ರಾಂಶುಪಾಲೆ ಡಾ| ಅನುಸೂಯ ರೈ ತಿಳಿಸಿದ್ದಾರೆ. ಶುಕ್ರವಾರ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ಕಾಲೇಜಿನಿಂದ ಯಾವುದೇ ದೂರು ನೀಡಲಾಗಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.