ಉಡುಪಿ: ಇಲ್ಲಿನ ಬೈಂದೂರಿನಲ್ಲಿ ಚಾಕಲೇಟ್ ನುಂಗಿ ಬಾಲಕಿ ಸಾವನ್ನಪ್ಪಿದ್ದಾಳೆ ಎನ್ನಲಾದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಬಾಲಕಿಯ ಸಾವಿಗೆ ಚಾಕ್ಲೇಟ್ ಕಾರಣ ಅಲ್ಲ, ಹುಟ್ಟಿನಿಂದಲೇ ಆಕೆಗೆ ಹೃದಯ ಸಂಬಂಧಿ ಸಮಸ್ಯೆಯಿತ್ತು ಎಂದು ವೈದ್ಯಕೀಯ ವರದಿಯಲ್ಲಿ ಬಹಿರಂಗಗೊಂಡಿದೆ.
ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಸುಪ್ರೀತಾ ಪೂಜಾರಿ ಎಂಬುವವರ ಮಗಳು ಸಮನ್ವಿ (6) ಉಪ್ಪುಂದದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ. ಜುಲೈ 20 ರ ಬೆಳಿಗ್ಗೆ ಎಂದಿನಂತೆ ಶಾಲೆಗೆ ಹೊರಟಿದ್ದ ಆಕೆ, ಶಾಲೆಗೆ ಹೋಗಲ್ಲ ಎಂದಿದ್ದಕ್ಕೆ ತಾಯಿ ಚಾಕ್ಲೇಟ್ ಕೊಟ್ಟು ಸಮಾಧಾನ ಪಡಿಸಿದ್ದಾರೆ ಎನ್ನಲಾಗಿದೆ.
ಚಾಕ್ಲೇಟ್ ಬಾಯಲ್ಲಿದ್ದಂತೆ ಶಾಲೆಯ ಬಸ್ ಬಂದ ಕಾರಣ ತಾಯಿ ಸಮನ್ವಿಯನ್ನು ಎತ್ತಿಕೊಂಡು ಬಸ್ ಬಳಿ ಬಂದಿದ್ದಾರೆ. ಬಸ್ ಬಳಿ ಬರುತ್ತಲೇ ಬಾಲಕಿ ಕುಸಿದು ಬಿದ್ದಿದ್ದಾಳೆ. ಇದರಿಂದ ಮನೆಯವರು, ಶಾಲಾ ವಾಹನದ ಡ್ರೈವರ್, ಸಹ ವಿದ್ಯಾರ್ಥಿಗಳು, ಎಲ್ಲರೂ ಆತಂಕಗೊಂಡಿದ್ದರು. ಬಳಿಕ ಬೈಂದೂರಿನ ಖಾಸಗೀ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಸಮನ್ವಿ ಮೃತಪಟ್ಟಿರುವುದು ದೃಢಗೊಂಡಿತ್ತು. ಆದರೆ ಇದೀಗ ವೈದ್ಯಕೀಯ ವರದಿಯಲ್ಲಿ ನಿಜಾಂಶ ಬಯಲಾಗಿದೆ.