ಮಂಗಳೂರು: ಆಟಿ ತಿಂಗಳು ಎಂದಾಕ್ಷಣ ಯಾವುದೇ ಶುಭ ಸಮಾರಂಭಗಳು ನಡೆಯುವುದಿಲ್ಲ ಎಂಬ ವಾಡಿಕೆ ಇದೆ. ಮನೆ ಕಟ್ಟುವುದು, ವಾಹನ ಖರೀದಿ, ಮದುವೆ, ಆಸ್ತಿ ಖರೀದಿ ಇತ್ಯಾದಿಗಳನ್ನು ನಿಷೇಧಿಸುತ್ತಾರೆ. ತುಳುನಾಡಿನ ಜಾನಪದ ಸಾಂಸ್ಕೃತಿಕ ಆಚರಣೆಗಳಲ್ಲಿ ಆಟಿ(ಆಷಾಡ)ತಿಂಗಳಿಗೆ ವಿಶಿಷ್ಟ ಸ್ಥಾನ-ಮಾನ ಇದೆ.
ಆಟಿ ತಿಂಗಳಿನಲ್ಲಿ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಆಟಿ ಅಮವಾಸ್ಯೆಯ ದಿನ ಕಷಾಯಾ ಕುಡಿಯುವ ಪದ್ದತಿಯೂ ಇದೆ. ಈ ಕಷಾಯಾವೂ ಹಾಲೆ ಮರದ ತೊಗಟೆಯಿಂದ ಮಾಡಿದ್ದು, ಆಟಿ ಅಮವಾಸ್ಯೆಯ ದಿನದಂದು ಸೂರ್ಯೋದಯಕ್ಕೂ ಮುನ್ನ ಹಾಲೆ ಮರದ ತೊಗಟೆಯನ್ನು ಕಲ್ಲಿನಿಂದ ಜಜ್ಜಿ ತಂದು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಾರೆ.

ಈ ಕಷಾಯಕ್ಕೆ ರೋಗಗಳನ್ನು ನಿವಾರಿಸುವ ಶಕ್ತಿ ಇದೆ. ಹಾಲೆ ಮರದ ಕಷಾಯವೂ ಜಾನಪದ ಔಷಧಿಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಆಟಿ ತಿಂಗಳ ಇನ್ನೊಂದು ವಿಶೇಷವೆಂದರೆ ಹಳ್ಳಿ ಆಹಾರಗಳು. ಈ ತಿಂಗಳು ಮಳೆಗಾಲವಾದ್ದರಿಂದ ಹಳ್ಳಿಯ ಜನರು ಕೆಲಸದಿಂದ ಸ್ವಲ್ಪ ದಿನ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಾರೆ. ಹಾಗಾಗಿ ಆಟಿಯಲ್ಲಿ ವಿಶೇಷವಾಗಿ ಹಳ್ಳಿಯಲ್ಲೇ ಸಿಗುವ ಆಹಾರಗಳಾದ ಅರಳಿನ ಎಲೆಯ ಸೊಪ್ಪು, ಹಲಸಿನ ಬೀಜದ ಸುಕ್ಕ, ಮುಳ್ಳು ಸೌತೆ ಕಡುಬು, ಕೆಸುವಿನ ಎಲೆಯ ಪತ್ರೊಡೆ ಇತ್ಯಾದಿ ತಿನಸುಗಳನ್ನು ತಯಾರಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಆಚರಣೆಗಳು,ತಿನಸುಗಳು ಕ್ರಮೇಣವಾಗಿ ಮರೆಯುಗುತ್ತಿರುವುದು ವಿಷಾದನೀಯ.
ಇನ್ನು ವೈಜ್ಞಾನಿಕ ಯುಗದಲ್ಲಿ ಅದೆಷ್ಟೋ ಆಚರಣೆಗಳನ್ನು ಮರೆಯಾಗುತ್ತಿವೆ, ಅಂತಹ ಆಚರಣೆಯಲ್ಲಿ ಗದ್ದೆಗೆ ಕಲ್ಲಿ ಇಡುವ ಕ್ರಮವು ಒಂದು. ಮಾಣಿಯಲ್ಲಿ ಶಂಭುಗ ಸೀತಾರಾಮ ಶೆಟ್ಟಿಯವರು ನಾಟಿ ಮಾಡಿದ ಗದ್ದೆಗೆ ಆಟಿ ಅಮಾವಾಸ್ಯೆಯಂದು ಕಲ್ಲಿ (ಕಾಪು) ಇಡುವ ಪದಾತಿ ಇನ್ನು ಜೀವಂತವಿದೆ. ಇವರು ಮಾಣಿ ಶ್ರೀ ಗುಡ್ಡ ಚಾಮುಂಡಿ ದೈವದ ಚಾಕರಿಯವರಾಗಿದ್ದು ಅಪ್ಪಟ ಕೃಷಿಕರಾಗಿದ್ದಾರೆ.

ಆಟಿ ಅಮವಾಸ್ಯೆಯಂದು ಮುಂಜಾನೆ ವೇಳೆಗೆ ಗದ್ದೆಯ ಮದ್ಯ ಕಾಪು (ಕಲ್ಲಿಯನ್ನು ಊರಿ) ಇಟ್ಟು ನಂತರ ಮರದ ಕೆತ್ತೆಯನ್ನು ಬೊಳ್ಳು ಕಲ್ಲಿನಿಂದ ಗುದ್ದಿ ಕೆತ್ತೆಯನ್ನು ತೆಗೆಯುವುದು ಕತ್ತಿ ಮುಟ್ಟಿಸಬಾರದು ಎನ್ನುವ ನಂಬಿಕೆ ಇದ್ದು, ನಂತರ ಕಷಾಯ ಮಾಡಿ ಕುಡಿಯುವ ಪದ್ಧತಿ ಇದೆ. ಈಗ ಗದ್ದೆ ತೋಟಗಳು ಮರೆಯಾದುದರಿಂದ ಕಲ್ಲಿ ಇಡುವ ಪದ್ಧತಿ ಕಾಣಲು ಸಿಗುವುದಿಲ್ಲ.
ಗದ್ದೆಯೆ ಮಾಯವಾಗಿ ಕೇವಲ ಅಡಿಕೆ ಕೃಷಿಗೆ ಹೆಚ್ಚಿನ ಒತ್ತು ನೀಡಿ ರುವ ಈ ಕಾಲದಲ್ಲಿ ಅಲ್ಲೊಂದು ಇಲ್ಲೊಂದು ಇಂತಹ ಪದ್ಧತಿ ಗಳು ಉಳಿದಿರುವುದು ಸಂತಸದ ಸಂಗತಿ.