ಉತ್ತರಪ್ರದೇಶ: ತನ್ನ ಮಗನ ಮೇಲೆ ಹಲ್ಲೆ ನಡೆಸಿದಕ್ಕೆ ಪೊಲೀಸರಿಗೆ ದೂರು ನೀಡಿದಕ್ಕೆ 65 ವರ್ಷದ ದಲಿತ ವೃದ್ಧನಿಗೆ ಮೂತ್ರ ಕುಡಿಸಿರುವ ಘಟನೆ ಲಲಿತಪುರ ಗ್ರಾಮದ ರೊಡಾ ಎಂಬಲ್ಲಿ ನಡೆದಿದೆ.
ಇನ್ನು ಆರೋಪಿಯನ್ನು ಸೋನು ಯಾದವ್ ಎಂದು ಗುರುತಿಸಲಾಗಿದೆ. ಈತ ಕೆಲ ದಿನಗಳ ಹಿಂದೆ ವೃದ್ಧನ ಮಗನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದನು. ಹೀಗಾಗಿ ತಂದೆ- ಮಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಸೋನು ವಿರುದ್ಧ ದೂರು ದಾಖಲಿಸಿದ್ದರು.
ಇತ್ತ ತನ್ನ ಮೇಲೆ ದೂರು ದಾಖಲಾಗುತ್ತಿದ್ದಂತೆಯೇ ಸೋನು, ಇದನ್ನು ಇಲ್ಲಿಯೇ ನಿಲ್ಲಿಸುವಂತೆ ಹೇಳಿದ್ದಾನೆ. ಅಲ್ಲದೆ ಕೇಸ್ ಹಿಂಪಡೆದುಕೊಳ್ಳುವಂತೆ ಪೀಡಿಸಲು ಆರಂಭಿಸಿದ್ದಾನೆ. ವೃದ್ಧ ಅಮರ್ ಹಾಗೂ ಮಗನನ್ನು ಮಂಗಳವಾರ ಮೂತ್ರ ಕುಡಿಯುವಂತೆ ಸೋನು ಒತ್ತಾಯಿಸಿದ್ದಾನೆ.
ಸೋನು ಮೂತ್ರ ಕುಡಿಯುವಂತೆ ಒತ್ತಾಯಿಸಿದಾಗ ನಾನು ನಿರಾಕರಿಸಿದೆ. ಈ ವೇಳೆ ಆತ ನನ್ನ ಮೇಲೆ ಕೋಲಿನಿಂದ ಹಲ್ಲೆ ಮಾಡಿದ್ದಾನೆ. ಕೆಲ ದಿನಗಳ ಹಿಂದೆ ನನ್ನ ಮಗನ ಮೇಲೆಯೂ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಹೀಗಾಗಿ ಸೋನು ವಿರುದ್ಧ ನಾವು ಪೊಲೀಸರಿಗೆ ದೂರು ನೀಡಿದ್ದೆವು. ಈ ಹಿನ್ನೆಲೆಯಲ್ಲಿ ಆತ ನಮ್ಮೊಂದಿಗೆ ರಾಜಿ ಮಾಡಿಕೊಳ್ಳಲು ಒತ್ತಾಯಿಸಿರುವುದಾಗಿ ಅಮರ್ ತಿಳಿಸಿದ್ದಾರೆ.