ಬೆಂಗಳೂರು: ರಾಜ್ಯದ ಎರಡು ಕ್ಷೇತ್ರಗಳಲ್ಲಿ ಇಂದು ಉಪಚುನಾವಣೆಗೆ ಇಂದು ಮತದಾನ ನಡೆದಿದ್ದು ಆರ್.ಆರ್. ನಗರದಲ್ಲಿ ನೀರಸ ಪ್ರತಿಕಕ್ರಿಯೆ ವ್ಯಕ್ತವಾಗಿದೆ. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಮತದಾನವಾಗಿದೆ.
ಬೆಳಗ್ಗೆ 7ರಿಂದ ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವನ್ನು ಕಲ್ಪಿಸಲಾಗಿತ್ತು. ಇಂದು ಆರ್.ಆರ್. ನಗರದಲ್ಲಿ ಶೇಕಡ 40 ರಷ್ಟು ಮತದಾನವಾಗಿದ್ದು, ಶಿರಾದಲ್ಲಿ ಶೇಕಡ 78 ರಷ್ಟು ಮತದಾನವಾಗಿದೆ. ನಗರ ಪ್ರದೇಶದ ಜನ ಸಾಮಾನ್ಯವಾಗಿ ಮತದಾನದಿಂದ ದೂರವೇ ಉಳಿಯುತ್ತಾರೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಈ ಬಾರಿ ಕೊರೋನಾ ಕಾರಣದಿಂದ ಹೆಚ್ಚಿನ ಸಂಖ್ಯೆಯ ಜನ ಮತದಾನ ಮಾಡಿಲ್ಲ ಎಂದು ಹೇಳಲಾಗಿದೆ.
ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಚುನಾವಣೆ ನಡೆಸುತ್ತಿದ್ದರೂ, ಬಹುತೇಕ ಜನ ಓಟ್ ಮಾಡಲು ಧೈರ್ಯ ತೋರಿಲ್ಲ. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಭಾಗಿಯಾಗಿದ್ದಾರೆ.
ಈ ಮೂಲಕ ಉಪ ಚುನಾವಣೆಯ ಮತದಾನ ಮುಕ್ತಾಯಗೊಂಡು, ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ. ನವೆಂಬರ್ 10ರಂದು ನಡೆಯಲಿರುವ ಮತಏಣಿಕೆಯಂದು ಯಾರ ಕೊರಳಿಗೆ ವಿಜಯದ ಸರಮಾಲೆ ಬೀಳುವುದೋ ಎಂಬುದನ್ನು ಕಾದು ನೋಡಬೇಕಿದೆ.