ಬೆಂಗಳೂರು: ಕಳೆದ ಎರಡು ತಿಂಗಳಿನಿಂದ ರಾಜ್ಯದಲ್ಲಿ ಅತಿವೃಷ್ಟಿ ಆಗುತ್ತರುವ ಹಿನ್ನೆಲೆಯಲ್ಲಿ ಈವರೆಗೆ ಒಟ್ಟು 70 ಮಾನವ ಪ್ರಾಣ ಹಾನಿ ಸಂಭವಿಸಿದೆ. ಜೂನ್ 1 ರಿಂದ ಆಗಸ್ಟ್ 6ರ ವರೆಗೆ ಮಳೆಗೆ ಒಟ್ಟು 70 ಜನರು ಪ್ರಾಣ ಕಳೆದುಕೊಂಡಿದ್ದಾರೆ. 507 ಜಾನುವಾರು ಜೀವ ಹಾನಿ ಸಂಭವಿಸಿದ್ದು, 3559 ಮನೆಗಳು ಸಂಪೂರ್ಣ ಹಾನಿಯಾಗಿವೆ.
17,212 ಮನೆಗಳು ಭಾಗಶ: ಹಾನಿಯಾಗಿದ್ದು, 1,29,087 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. 7,942 ಹೆಕ್ಟೇರ್ ತೋಟಗಾರಿಕಾ ಬೆಳೆಗಳು ಹಾನಿಗೊಳಗಾಗಿವೆ. ಇನ್ನು 3,162 ಕಿಲೋ ಮೀಟರ್ ರಸ್ತೆ ಹಾನಿಗೊಂಡಿದ್ದು, 8,445 ಕಿಲೋ ಮೀಟರ್ ಗ್ರಾಮೀಣ ರಸ್ತೆಗಳು ಡ್ಯಾಮೇಜ್ ಆಗಿವೆ. 1,068ಸೇತುವೆ ಮತ್ತು ಕಲ್ವರ್ಟ್ ಗಳು ಹಾನಿಯಾಗಿವೆ.
ಇದಲ್ಲದೇ 4,531 ಶಾಲೆಗಳು, 222 ಅಂಗನವಾಡಿಗಳು, 16,760 ವಿದ್ಯುತ್ ಕಂಬಗಳು, 1,469 ಟ್ರಾನ್ಸ್ ಫಾರ್ಮರ್ ಗಳು, 409 ಕಿಲೋ ಮೀಟರ್ ವಯರ್ ಗಳು ಮತ್ತು 93 ಸಣ್ಣ ನೀರಾವರಿ ಕೆರೆಗಳು ಹಾನಿಗೊಳಗಾಗಿವೆ.
ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಬಳಿ ಆಗಸ್ಟ್ 2 ರ ಮಾಹಿತಿಯಂತೆ ಒಟ್ಟು 657 ಕೋಟಿ ರೂಪಾಯಿ ಲಭ್ಯವಿತ್ತು. ಇಂದು ರಾಜ್ಯ ಸರ್ಕಾರ 21 ಜಿಲ್ಲೆಗಳಿಗೆ ಒಟ್ಟು 200 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ.