ಉಡುಪಿ: ಕುಂಜಿಬೆಟ್ಟುವಿನಲ್ಲಿ ನಡೆದ ಕಾರು ಡಿಕ್ಕಿ ಹೊಡೆಸಿ ಗ್ಯಾಂಗ್ ವಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಮತ್ತೆ ಮೂರು ಎಫ್ಐಆರ್ ದಾಖಲಾಗಿವೆ.
ಬಂಧಿತ ಆರೋಪಿ ಮಹಮ್ಮದ್ ಸಕಲೈನ್ ಎಂಬಾತ ನೀಡಿದ ದೂರು ಆಧರಿಸಿ ಶರೀಫ್, ಅಲ್ಫಾಜ್ ಮತ್ತು ಮಜೀದ್ ಎಂಬವರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ರಸ್ತೆಯಲ್ಲಿ ಕಾರು ಅಡ್ಡ ಹಾಕಿ ತಲ್ವಾರ್ ಮತ್ತು ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಬಗ್ಗೆ ಸಕಲೈನ್ ದೂರು ದಾಖಲಿಸಿದ್ದನು.
ಇನ್ನು ವೈರಲ್ ಆಗಿದ್ದ ಗ್ಯಾಂಗ್ ವಾರ್ ವೀಡಿಯೋ ಆಧಾರದಲ್ಲಿ ಶಸ್ತ್ರಾಸ್ತ್ರ ಕಾಯ್ದೆಯನ್ವಯಶಾಂತಿ ಭಂಗ, ಅಕ್ರಮ ಕೂಟ ಮತ್ತು ಸಾರ್ವನಿಕರಿಗೆ ಭಯ ಹುಟ್ಟಿಸುವುದು ಆರೋಪದಡಿ ಉಡುಪಿ ನಗರ ಠಾಣೆ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದು ಎಫ್ ಐಆರ್ ಮಾಡಲಾಗಿದೆ.
ಇದೇ ವೇಳೇ ಗ್ಯಾಂಗ್ ವಾರ್ ಗಾಯಾಳು ಮಹಮ್ಮದ್ ಶರೀಫ್ ತನ್ನದೇ ಗ್ಯಾಂಗ್ ನ ಆಶಿಕ್ ವಿರುದ್ಧ ದೂರು ನೀಡಿದ್ದು, ಎಫ್ ಐಆರ್ ದಾಖಲಾಗಿದೆ. ಆಶಿಕ್ ಬಗ್ಗೆ ಪೊಲೀಸರಿಗೆ ಶರೀಫ್ ಮಾಹಿತಿ ನೀಡಿದ್ದಾಗಿ ಆರೋಪಿಸಿ ಕೊಲ್ಲುವ ಉದ್ದೇಶದಿಂದ ಅಶಿಕ್ ಹಲ್ಲೆ ನಡೆಸಿರುವುದಾಗಿ ಶರೀಫ್ ದೂರು ನೀಡಿದ್ದನು.