ಬ್ರಹ್ಮಾವರ: ಇಲ್ಲಿನ ಕೋಡಿ ಕನ್ಯಾಣದ ಅಂಗನವಾಡಿಯ ಹತ್ತಿರ ಮೂರು ಬೈಕ್ ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮವಾಗಿ ಓರ್ವ ಯುವಕ ಮೃತಪಟ್ಟ ಘಟನೆ ನಡೆದಿದೆ.
ಈ ಘಟನೆಯಿಂದ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಮೃತಪಟ್ಟ ಯುವಕ ಪಾರಂಪಳ್ಳಿಯ ರವಿಯಾನೆ ರವೀಂದ್ರ ಪೂಜಾರಿ(30).
ಘಟನೆಯ ವಿವರ: ಕೋಡಿ ಕನ್ಯಾಣದಿಂದ ಪಾರಂಪಳ್ಳಿಗೆ ಹೋಗುತ್ತಿದ್ದ ಎರಡು ಬೈಕ್ ಗಳು ಪಾರಂಪಳ್ಳಿಯಿಂದ ಬರುತ್ತಿದ್ದ ಬೈಕ್ ಗೆ ಮುಖಾಮುಖಿ ಡಿಕ್ಕಿಹೊಡೆದು ಅಪಘಾತ ಸಂಭವಿಸಿದೆ. ಅಷ್ಟೇಅಲ್ಲದೆ ಅಪಘಾತ ನಡೆದ ಸ್ಥಳದ ವಿರುದ್ಧ ದಿಕ್ಕಿನಲ್ಲಿ ಯಾವುದೇ ಪಾರ್ಕಿಂಗ್ ಸಿಗ್ನಲ್ ಇಲ್ಲದೇ, ರಸ್ತೆ ಬದಿಯಲ್ಲಿ ಕಾರೊಂದು ಪಾರ್ಕಿಂಗ್ ಮಾಡಿದ್ದು ಬೈಕ್ ಸವಾರರಿಗೆ ಮುಂದೆ ಬರುತ್ತಿದ್ದ ಬೈಕ್ ಕಾಣಿಸದೆ ಇದ್ದದರಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಅಪಘಾತದ ತೀವ್ರತೆಗೆ ಬೈಕ್ ಮುಖಾಮುಖಿ ಡಿಕ್ಕಿಯಾಗಿ ನಿಂತ ಕಾರಿಗೆ ಅಪ್ಪಳಿಸಿದ್ದು, ಬೈಕ್ ಸವಾರರು ಗಂಭೀರ ಗಾಯಗೊಂಡಿರುತ್ತಾರೆ. ಗಂಭೀರ ಗಾಯಗೊಂಡ ಸ್ಥಳೀಯ ಚರಣ್ ಹಾಗೂ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳಕ್ಕಾಗಮಿಸಿದ ಕೋಟ ಎಸ್ಐ ಸುಧಾ ಪ್ರಭು ಹಾಗೂ ಸಿಬ್ಬಂದಿಗಳಾದ ರಾಘವೇಂದ್ರ ಶೆಟ್ಟಿ, ಮೋಹನ್ ಕೊತ್ವಲ್, ಸಂತೋಷ್, ರಾಜೇಶ್ ಸೇರಿ ಘಟನೆಯನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.