ಮಂಗಳೂರು: ಕಳೆದ ವರ್ಷ ಬಹಳ ಅದ್ಧೂರಿಯಾಗಿ ನಡೆದ ಬೆಂಗಳೂರು ಕಂಬಳ ಈ ಬಾರಿ ನಡೆಯುವುದೇ ಅನುಮಾನವಾಗಿದೆ. 2024 ನೇ ಸಾಲಿನಲ್ಲಿ ಕಂಬಳವು ಅ.26ಕ್ಕೆ ನಿಗದಿಯಾಗಿತ್ತು. ಆದರೆ ಕಂಬಳ ನಡೆಯುವುದಿಲ್ಲ ಅನ್ನುವಂತಹ ಮಾತುಗಳು ಕೇಳಿಬರುತ್ತಿವೆ.
ಸದ್ಯದ ಮಾಹಿತಿ ಪ್ರಕಾರ ಈ ಋತುವಿನ ಆರಂಭದಲ್ಲಿ ಬೆಂಗಳೂರು ಕಂಬಳ ನಡೆಯುವುದಿಲ್ಲ. ಆದರೆ ಕಂಬಳ ಸಮಿತಿ ಹಾಗೂ ಕೋಣಗಳ ಯಜಮಾನರು ಒಪ್ಪಿಗೆ ಸೂಚಿಸಿದರೆ ಮಾರ್ಚ್ನಲ್ಲಿ ಬೆಂಗಳೂರು ಕಂಬಳ ನಡೆಸಬಹುದೇ ಎಂಬ ಬಗ್ಗೆ ಚರ್ಚೆ ಈಗ ನಡೆಯುತ್ತಿದೆ. ಇದಕ್ಕಾಗಿ ಅರಮನೆ ಮೈದಾನದ ಅನುಮತಿಗೆ ಬೆಂಗಳೂರು ಸಮಿತಿ ಅರ್ಜಿ ಹಾಕಿದೆ. ಈ ಕುರಿತಂತೆ ಚರ್ಚೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕಂಬಳದ ತೀರ್ಪುಗಾರರ ಸಮಿತಿಯ ಸಂಚಾಲಕರಾದ ವಿಜಯ್ ಕುಮಾರ್ ಕಂಗಿನಮನೆ, ‘ಜಿಲ್ಲೆಯ ಹೊರಭಾಗಕ್ಕೆ 157 ಜತೆ ಕೋಣಗಳನ್ನು ಕೊಂಡೊಯ್ಯುವುದು ಸುಲಭದ ಕೆಲಸವಲ್ಲ. 65 ಜತೆ ಕೋಣಗಳನ್ನು ಆಯ್ಕೆ ಮಾಡಿಮಾತ್ರ ಹೊರಜಿಲ್ಲೆಗೆ ಕೊಂಡೊಯ್ದರೆ ಹೆಚ್ಚು ಅನುಕೂಲ. ಹೀಗೆ ಮಾಡಿದರೆ ಬೇರೆ ಕಡೆಯೂ ಕಂಬಳ ನಡೆಸಬಹುದು. ಇಲ್ಲದಿದ್ದರೆ ಕಷ್ಟ’ ಎನ್ನುತ್ತಾರೆ.
ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ, ‘ಈ ಬಾರಿ ಬೆಂಗಳೂರಿನಲ್ಲಿ ಕಂಬಳ ನಡೆಯುವ ಸಾಧ್ಯತೆ ಕಡಿಮೆ. ಬೆಂಗಳೂರು ಕಂಬಳಕ್ಕೆ ಸಮಿತಿ ದಿನಾಂಕ ನೀಡಿತ್ತು. ಆದರೆ ಕಂಬಳ ಆಯೋಜನೆಯ ಸಿದ್ಧತೆ ನಡೆದಿಲ್ಲ. ಹೀಗಾಗಿ ಫೆಬ್ರವರಿಯಲ್ಲಿ ಶಿವಮೊಗ್ಗ ಕಂಬಳ ನಡೆಯಲಿದ್ದು, ಈ ಕುರಿತ ತಯಾರಿ ನಡೆಸಲಾಗುತ್ತಿದೆ,’ ಎಂದಿದ್ದಾರೆ.
ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಶಾಸಕ ಅಶೋಕ್ ಕುಮಾರ್ ರೈ ಈ ಕುರಿತಂತೆ ಮಾತನಾಡಿ,ಬೆಂಗಳೂರು ಕಂಬಳಕ್ಕೆ ಕಂಬಳ ಸಮಿತಿಯಿಂದ ದಿನಾಂಕ ಪ್ರಕಟವಾಗಿತ್ತು. ಆದರೆ ನಾವು ಅಂತಿಮ ತೀರ್ಮಾನ ಮಾಡಿರಲಿಲ್ಲ. ಯಾರಾದರೂ ಆಸಕ್ತರಿದ್ದರೆ ಮುಂದೆ ಬರಬಹುದು ಎಂದು ನಾವೂ ನಿರೀಕ್ಷೆಯಲ್ಲಿದ್ದೆವು. ಯಾರೂ ಮುಂದೆ ಬರಲಿಲ್ಲ. ಸದ್ಯಕ್ಕೆ ಕಂಬಳ ನಡೆಸಲು ಸಾಧ್ಯವಿಲ್ಲ. ಆದರೂ ಕಂಬಳ ಸಮಿತಿ ಹಾಗೂ ಕೋಣಗಳ ಯಜಮಾನರು ಅನುಮತಿ ನೀಡಿದರೆ ಫೆಬ್ರವರಿ/ಮಾರ್ಚ್ನಲ್ಲಿ ನಡೆಸುವ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ.