ವಿಟ್ಲ: ಇಲ್ಲಿನ ವಿಟ್ಲ ಪಡ್ನೂರು ಗ್ರಾಮದ ಕಡಂಬು ಎಂಬಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಕುಖ್ಯಾತ ಕಳ್ಳ ಬಶೀರ್ @ ಅಬ್ದುಲ್ ಬಶೀರ್ @ ರಾಧುಕಟ್ಟೆ ಬಶೀರ್ ಬಂಧಿತ ಆರೋಪಿ.
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವಿಟ್ಲಪಡ್ನೂರು ಗ್ರಾಮದ ಕಡಂಬು ಎಂಬಲ್ಲಿರುವ ಹೈದರಾಲಿ ಎಂಬವರ ಮನೆಯ ಬೀಗವನ್ನು ಮುರಿದು ರಾತ್ರಿ ಬೆಡ್ರೂಂನಲ್ಲಿ ಎರಡು ಕಪಾಟುಗಳಲ್ಲಿಟ್ಟಿದ್ದ 2.5 ಗ್ರಾಂ ಚಿನ್ನದ ಉಂಗುರ-1 ಹಾಗೂ 4 ಗ್ರಾಂ ನ ಕಿವಿಯ ಓಲೆಯನ್ನು ಕಳ್ಳತನಗೈದ ಬಗ್ಗೆ ವಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಅದರಂತೆ ಈ ಪ್ರಕರಣದ ಆರೋಪಿ ಬಶೀರ್ ನನ್ನು ವಿಟ್ಲ ಠಾಣಾ ವ್ಯಾಪ್ತಿಯ ರಾಧುಕಟ್ಟೆ ಎಂಬಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯಿಂದ ಕಳ್ಳತನ ಮಾಡಿದ ಚಿನ್ನದ ಕಿವಿಯೋಲೆ ಮತ್ತು ಚಿನ್ನದ ಉಂಗುರ ಹಾಗೂ ಕೃತ್ಯಕ್ಕೆ ಬಳಸಲಾದ ಯಮಹಾ ಕಂಪೆನಿಯ ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿ ಬಶೀರ್ ವಿಟ್ಲ ಠಾಣಾ ವ್ಯಾಪ್ತಿಯ ಹಲವಾರು ಪ್ರಕರಣಗಳಲ್ಲಿ ಪಾಲ್ಗೊಂಡಿದ್ದ. ಕೊಣಾಜೆ ಠಾಣಾ ವ್ಯಾಪ್ತಿಯ ಮುಡಿಪು ಚಿನ್ನದಂಗಡಿ ಕೊರೆದು ಕಳ್ಳತನ ಮಾಡಿದ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಜೈಲು ಸೇರಿ ಬಿಡುಗಡೆಯಾಗಿದ್ದ. ಇದೀಗ ಮತ್ತೆ ಆರೋಪಿಯನ್ನು ಪೊಲೀಸರು ಜೈಲಿಗಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ ಸೋನಾವಣೆ ಮತ್ತು ಅಡಿಷನಲ್ ಎಸ್ಪಿ ಕುಮಾರಚಂದ್ರರವರುಗಳ ಮಾರ್ಗದರ್ಶನ, ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ಪ್ರತಾಪ ಸಿಂಗ್ ಥೂರಟ್ ರವರ ನೇತ್ರತ್ವದಲ್ಲಿ ನಾಗರಾಜ್ ಹೆಚ್ ಈ ಪೊಲೀಸ್ ನಿರೀಕ್ಷಕರು ವಿಟ್ಲ ಠಾಣೆ ರವರ ಸಾರಥ್ಯ , ಎಸ್ ಐ ಸಂದೀಪಕುಮಾರ್ ಶೆಟ್ಟಿ, ಸಂಜೀವ ಪುರುಷ ಪಿಎಸೈ, ಸಿಬ್ಬಂದಿಯಾದ ಜಯರಾಮ , ಪ್ರಸನ್ನ , ಹೇಮರಾಜ್, ಅಶೋಕ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.