ನವದೆಹಲಿ: ತುಳು ಭಾಷೆಯನ್ನು ಭಾರತೀಯ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಯಾವುದೇ ಯೋಜನೆ ಕೇಂದ್ರ ಸರಕಾರದ ಮುಂದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು ಬುಧವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಕಾಸರಗೋಡು ಸಂಸದ ರಾಜಮೋಹನ್ ಉನ್ನಿತ್ತಾನ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಪ್ರಸ್ತುತ ಅಧಿಕೃತ ಭಾಷೆಗಳ ಸಂಖ್ಯೆಯನ್ನು ಹೆಚ್ಚಿಸುವುದು ಪ್ರಾಯೋಗಿಕವೂ ಅಲ್ಲ ಅಥವಾ ಆಡಳಿತಾತ್ಮಕವಾಗಿ ಕಾರ್ಯಸಾಧ್ಯವೂ ಅಲ್ಲ ಎಂದು ಹೇಳುವ ಮೂಲಕ ಅಸಂಖ್ಯಾತ ತುಳುವರ ಆಕಾಂಕ್ಷೆಗಳಿಗೆ ಸಚಿವರು ತಣ್ಣೀರು ಎರಚಿದರು.
ರಾಜಮೋಹನ್ ಉನ್ನಿತ್ತಾನ್ ಅವರು ತುಳು ಭಾಷೆಯನ್ನು 8 ನೇ ಶೆಡ್ಯೂಲ್ಗೆ ಸೇರಿಸುವ ಬಗ್ಗೆ ಸರ್ಕಾರದ ನಿಲುವನ್ನು ಕೇಳಿದ್ದರು. ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಸಚಿವರು “ಡಾ. ಸೀತಾಕಾಂತ್ ಮೊಹಾಪಾತ್ರ ಸಮಿತಿಯು ಎಂಟನೇ ಶೆಡ್ಯೂಲ್ನಲ್ಲಿರುವ ಭಾಷೆಗಳನ್ನು ಒಕ್ಕೂಟದ ಅಧಿಕೃತ ಭಾಷೆಗಳಾಗಿ ಗುರುತಿಸುವ ಬಗ್ಗೆ ಯಥಾಸ್ಥಿತಿಯನ್ನು ಮುಂದುವರಿಸಬೇಕು ಎಂದು ಶಿಫಾರಸು ಮಾಡಿತ್ತು. ಪ್ರಸ್ತುತ, ಅಧಿಕೃತ ಭಾಷೆಗಳ ಸಂಖ್ಯೆಯನ್ನು ಹೆಚ್ಚಿಸುವುದು ಪ್ರಾಯೋಗಿಕ ಅಥವಾ ಆಡಳಿತಾತ್ಮಕವಾಗಿ ಕಾರ್ಯಸಾಧ್ಯವಲ್ಲ’ ಎಂದು ಸಚಿವರು ತಿಳಿಸಿದ್ದಾರೆ.
“ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಬೇಡಿಕೆಗಳು ಕಾಲಕಾಲಕ್ಕೆ ಬಂದಿವೆ. ಉಪಭಾಷೆಗಳು ಮತ್ತು ಭಾಷೆಗಳ ವಿಕಾಸವು ಒಂದು ಕ್ರಿಯಾತ್ಮಕ ಪ್ರಕ್ರಿಯೆಯಾಗಿದೆ. ಇದು ಸಾಮಾಜಿಕ-ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಬೆಳವಣಿಗೆಗಳಿಂದ ಪ್ರಭಾವಿತವಾಗಿರುವುದರಿಂದ ಭಾಷೆಗಳಿಗೆ ಯಾವುದೇ ಮಾನದಂಡಗಳನ್ನು ನಿಗದಿಪಡಿಸುವುದು ಕಷ್ಟ ಎಂದ ಅವರು ಅವುಗಳನ್ನು ಉಪಭಾಷೆಗಳಿಂದ ಪ್ರತ್ಯೇಕಿಸುವುದೋ ಅಥವಾ ಎಂಟನೇ ಅನುಸೂಚಿಯಲ್ಲಿ ಸಂವಿಧಾನಕ್ಕೆ ಸೇರಿಸುವುದು ಎನ್ನುವ ನಿಷ್ಕರ್ಷೆಗೆ ಬರುವುದು ಕಷ್ಟ ಸಾದ್ಯವಾಗಿದೆ’ ಎಂದರು.
ಆದರೇ ಈ ಬಗ್ಗೆ ಅತ್ಯಧಿಕ ತುಳು ಭಾಷಿಗರನ್ನು ಹೊಂದಿರುವ ಉಡುಪಿ ಹಾಗೂ ದ.ಕ ಜಿಲ್ಲಾ ಸಂಸದರು ಸಂಸತ್ತಿನಲ್ಲಿ ಧ್ವನಿ ಎತ್ತದಿರುವುದು ತುಳು ಭಾಷಿಗರಿಗೆ ನಿರಾಶೆ ಉಂಟು ಮಾಡಿದೆ. ತುಳು ಭಾಷೆಗೆ ಸಂವಿಧಾನ ಮಾನ್ಯತೆ ದೊರಕಿಸಕೊಡಬೇಕು ಎಂಬ ಹಲವು ವರ್ಷಗಳ ಹೋರಾಟಕ್ಕೆ ದೊಡ್ಡ ಹಿನ್ನಡೆಯಾಗಿದೆ.