ಉಪ್ಪಿನಂಗಡಿ; ವೃದ್ಧೆಯ ಕುತ್ತಿಗೆಯಿಂದ ಸರ ಕದಿಯಲು ಹೋಗಿ ಯುವಕರಿಬ್ಬರು ಸಿಕ್ಕಿ ಬಿದ್ದ ಘಟನೆ ಗುಂಡ್ಯ ಸಮೀಪದ ಅಡ್ಡಹೊಳೆ ಎಂಬಲ್ಲಿ ನಡೆದಿದೆ.ಬೆಂಗಳೂರಿನ ಯಶವಂತಪುರದ ರೋಹಿತ್ (25) ಹಾಗೂ ಸಕಲೇಶಪುರದ ಅಶೋಕ್ (25) ಬಂಧಿತರು.
ಅಡ್ಡಹೊಳೆ ಡ್ರೈ ಫ್ರೂಟ್ಸ್ ಅಂಗಡಿ ನಡೆಸುತ್ತಿದ್ದ ತ್ರೇಸ್ಯಾಮಾ(60) ಅವರು ತಮ್ಮ ಅಂಗಡಿಯಲ್ಲಿ ಒಬ್ಬರೇ ಇದ್ದ ವೇಳೆ ಸ್ಕೂಟಿಯಲ್ಲಿ ಬಂದ ಕಳ್ಳರು ಅಂಗಡಿಗೆ ಬಂದು ಆಕೆಯ ಕತ್ತಿನಲ್ಲಿದ್ದ ಸರವನ್ನು ಕದಿಯಲು ಯತ್ನಿಸಿದ್ದಾರೆ.ಕೂಡಲೇ ಮಹಿಳೆ ಎಚ್ಚೆತ್ತುಕೊಂಡು ಅವರನ್ನು ಸ್ಥಳೀಯರ ಸಹಕಾರದಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ಇವರು ಬಂದ ಸ್ಕೂಟಿಯನ್ನು ಸಹ ಕದ್ದು ತಂದಿದ್ದರು ಎನ್ನಲಾಗಿದೆ. ಮಂಗಳೂರಿನಿಂದ ವ್ಯಕ್ತಿಯೊಬ್ಬರಿಂದ ಸ್ಕೂಟಿ ಖರೀದಿಸುವ ನೆಪದಲ್ಲಿ ಟೆಸ್ಟ್ ಡ್ರೈವ್ ಮಾಡುತ್ತೇವೆ ಎಂದು ಹೇಳಿ ಅದನ್ನು ಕದ್ದು ತಂದಿದ್ದರು ಎನ್ನಲಾಗಿದೆ. ಕದ್ದ ಸ್ಕೂಟಿಯಲಲಿ ಬೆಂಗಳೂರಿಗೆ ತೆರಳುವಾಗ ಅಡ್ಡಹೊಳೆ ವೃದ್ಧೆಯ ಸರ ಕದಿಯಲು ಹೋಗಿ ಸಿಕ್ಕಿ ಬಿದ್ದಿದ್ದಾರೆ.