ಪಡುಬಿದ್ರಿ: ಇಲ್ಲಿನ ಜಂಕ್ಷನ್ ನಲ್ಲಿ ತಾಯಿಯೊಂದಿಗೆ ಮಗನೊಬ್ಬ ಪೇಟೆಗೆ ಬಂದ ವೇಳೆಯಲ್ಲಿ ಮಗ ಮೊಬೈಲ್ ಕೊಡುವಂತೆ ಬೇಡಿಕೆಯಿಟ್ಟಿದ್ದು, ತಾಯಿ ನಿರಾಕರಿಸಿದ್ದಕ್ಕೆ ಮಗ ಸಾಯಲು ಹೆದ್ದಾರಿಗೋಡಿ ಲಾಡಿ ಢಿಕ್ಕಿಯಾಗಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಮುಂಬಯಿನ ಬೋರಿವಿಲಿಯ ಬೇಲಾಡಿಯ ತಾಯಿ ಮನೆಗೆ ಬಂದಿದ್ದ ಕುಶಲಾ ಹಾಗೂ ಅವರ ಪುತ್ರ ಕೌಶಿಕ್ (17) ಅವಘಾತಕ್ಕೆ ಒಳಗಾದ ಯುವಕ. ತಾಯಿ ಹಾಗೂ ಮಗ ಇಬ್ಬರೂ ಕೂಡ ಶನಿವಾರದಂದು ಪಡುಬಿದ್ರಿಗೆ ಬಂದಿದ್ದು, ಪಡುಬಿದ್ರಿಯ ಮುಖ್ಯ ಪೇಟೆಯ ಜಂಕ್ಷನ್ನ ನವರಂಗ್ ರೆಸ್ಟೋರೆಂಟಿನ ಬಳಿ ಮೊಬೈಲ್ ತೆಗೆಸಿಕೊಡುವ ವಿಚಾರದಲ್ಲಿ ತಾಯಿ-ಮಗನ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಮೊಬೈಲ್ ತೆಗೆಸಿಕೊಡದ ಕಾರಣ ತಾನೇ ಸಾಯುವುದಾಗಿ ಹೇಳಿ ರಾಷ್ಟ್ರೀಯ ಹೆದ್ದಾರಿ 66ರ ಮಧ್ಯೆ ಓಡಿ ಬಂದಾಗ ಲಾರಿಯೊಂದು ಢಿಕ್ಕಿಯಾಗಿ ಗಂಭೀರ ಗಾಯಗಳೊಂದಿಗೆ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಲಾರಿ ಚಾಲಕನ ಅತೀ ವೇಗ ಹಾಗೂ ಅಜಾಗ್ರತೆಯ ಚಾಲನೆಯ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ. ಕೌಶಿಕ್ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.