Tuesday, May 14, 2024
Homeತಾಜಾ ಸುದ್ದಿಚಾರ್ಮಾಡಿ ಘಾಟಿಯಲ್ಲಿ ಹೆಚ್ಚುತ್ತಿದೆ ಪ್ರವಾಸಿಗರ ಪುಂಡಾಟ: ಘಾಟಿ ಪ್ರದೇಶದಲ್ಲಿ ವಾಹನಗಳ ಸರತಿ ಸಾಲು: ಬೇಕಾಬಿಟ್ಟಿ ಪಾರ್ಕಿಂಗ್‌‍ನಿಂದ...

ಚಾರ್ಮಾಡಿ ಘಾಟಿಯಲ್ಲಿ ಹೆಚ್ಚುತ್ತಿದೆ ಪ್ರವಾಸಿಗರ ಪುಂಡಾಟ: ಘಾಟಿ ಪ್ರದೇಶದಲ್ಲಿ ವಾಹನಗಳ ಸರತಿ ಸಾಲು: ಬೇಕಾಬಿಟ್ಟಿ ಪಾರ್ಕಿಂಗ್‌‍ನಿಂದ ಇತರ ವಾಹನ ಸವಾರರ ಪರದಾಟ

spot_img
- Advertisement -
- Advertisement -

ಮಂಗಳೂರು: ಮಳೆಗಾಲ ಆರಂಭಗೊಂಡು ಚಾರ್ಮಾಡಿ ಘಾಟಿ ಪ್ರದೇಶದ ಜಲಪಾತ, ಹಳ್ಳ, ತೊರೆಗಳು ತುಂಬಿಕೊಳ್ಳತೊಡಗಿವೆ. ಇದರ ಜತೆ ಈ ಭಾಗದಲ್ಲಿ ಸಾಗುವ ಪ್ರವಾಸಿಗರ ಪುಂಡಾಟವೂ ಹೆಚ್ಚುತ್ತಿದೆ. ಇಲ್ಲಿನ ಸೌಂದರ್ಯವನ್ನು ಆಸ್ವಾದಿಸುವ ನೆಪದಲ್ಲಿ ಇತರ ವಾಹನ ಸವಾರರಿಗೆ ತೊಂದರೆ, ಟ್ರಾಫಿಕ್‌ ಜಾಮ್‌ ಮೊದಲಾದ ಸಮಸ್ಯೆಗಳು ಎದುರಾಗುತ್ತಿವೆ.

ಈ ವಾರಾಂತ್ಯದಲ್ಲಿ ಘಾಟಿಯಲ್ಲಿ ವಾಹನಗಳನ್ನು ನಿಲ್ಲಿಸಿ ಸಾಕಷ್ಟು ಪುಂಡಾಟಗಳು ನಡೆದಿವೆ. ಅಪಾಯಕಾರಿ ಬಂಡೆಗಳನ್ನು ಏರುವುದು, ಏಕಾಏಕಿ ರಸ್ತೆ ದಾಟುವುದು, ರಸ್ತೆ ಮಧ್ಯೆಯೇ ಸೆಲ್ಫಿ, ನೃತ್ಯ, ತಡೆಗೋಡೆ, ಜಾರುವ ಸ್ಥಳಗಳನ್ನು ಹತ್ತುವುದು ಮಾಮೂಲಾಗಿದೆ. ಘಾಟಿ ಪ್ರದೇಶದಲ್ಲಿ ವಾಹನ ಪಾರ್ಕಿಂಗ್‌ ಸರತಿ ಸಾಲಲ್ಲಿ ಕಂಡುಬಂದಿದೆ. ಮಂಜು ಕವಿದ ವಾತಾವರಣ, ಮಳೆ, ಬೇಕಾಬಿಟ್ಟಿ ವಾಹನ ಪಾರ್ಕಿಂಗ್‌ ನಿಂದ ಇತರ ವಾಹನ ಸವಾರರು ಪರದಾಡುವಂತಾಗಿದೆ. ಪೊಲೀಸ್‌ ವಾಹನ ಗಸ್ತು ನಿರತವಾಗಿದ್ದರೂ ಅದನ್ನು ಕಂಡ ಕೂಡಲೇ ಜಾಗ ಖಾಲಿ ಮಾಡುವ ಪ್ರವಾಸಿಗರು ಇನ್ನೊಂದು ಪ್ರದೇಶಕ್ಕೆ ಠಿಕಾಣಿ ಬದಲಾಯಿಸಿ ಪೊಲೀಸರಿಗೆ ಸವಾಲಾಗುತ್ತಿದ್ದಾರೆ.

ಇನ್ನು ಘಾಟಿ ಪ್ರದೇಶ ನಾನಾ ಇಲಾಖೆಗಳ ವ್ಯಾಪ್ತಿಗೆ ಒಳಪಟ್ಟಿದ್ದರೂ ಇಲ್ಲಿನ ಜಲಪಾತ, ಹಳ್ಳ, ತೊರೆಗಳ ಪ್ರದೇಶದಲ್ಲಿ ವಾಹನ ನಿಲುಗಡೆ ನಿಷೇಧದ ಕುರಿತು ಯಾವುದೇ ಎಚ್ಚರಿಕೆ ಫಲಕಗಳಿಲ್ಲದಿರುವುದು ಪ್ರವಾಸಿಗರಿಗೆ ವರದಾನವಾಗಿದೆ. ಇದರಿಂದ ಕೆಲವು ಪ್ರವಾಸಿಗರು ಪೊಲೀಸರೊಂದಿಗೆ ವಾಗ್ವಾದವನ್ನು ನಡೆಸುವ ಪ್ರಸಂಗಗಳು ನಡೆಯುತ್ತಿವೆ. ಘಾಟಿ ಪ್ರದೇಶದ ಸುಗಮ ಸಂಚಾರಕ್ಕೆ ಸಂಬಂಧಪಟ್ಟ ಇಲಾಖೆಗಳು ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ.

ಇನ್ನು ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮಂತಡ್ಕದಿಂದ ದಿಡುಪೆ ತನಕವೂ ಹೆಚ್ಚಿನ ಕಡೆಗಳಲ್ಲಿ ಮಳೆ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ. ಸೋಮಂತಡ್ಕದಿಂದ ದಿಡುಪೆಗೆ ಹೋಗುವ ರಸ್ತೆ 12 ಕಿ.ಮೀ. ದೂರವನ್ನು ಹೊಂದಿದೆ. ಒಂದು ಕಾಲದಲ್ಲಿ ತೀರ ಹಿಂದುಳಿದ ಪ್ರದೇಶವಾಗಿದ್ದ ದಿಡುಪೆ ಈಗ ಅನೇಕ ಅಗತ್ಯ ಸೌಲಭ್ಯಗಳನ್ನು ಹೊಂದಿದೆ. ಹಿಂದೆ ಸೋಮಂತಡ್ಕ-ದಿಡುಪೆ ರಸ್ತೆಯು ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೊಳಪಟ್ಟ ರಸ್ತೆಯಾಗಿತ್ತು. ಪ್ರಸ್ತುತ ಈ ರಸ್ತೆಯು ದಿಡುಪೆ-ಪೈಚಾರು ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿದ್ದರೂ ಕಳೆದ ಎರಡು ವರ್ಷದಿಂದ ಮಳೆಗಾಲದ ಚರಂಡಿ ನಿರ್ವಹಣೆ ಸಮರ್ಪಕವಾಗಿ ನಡೆದಿಲ್ಲ! ಈ ರಸ್ತೆ ಮುಂಡಾಜೆ, ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ ಗ್ರಾಮಗಳ ಮೂಲಕ ಹಾದು ಹೋಗುತ್ತದೆ.

ಈಗಾಗಲೇ ಈ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ರಸ್ತೆ ಚರಂಡಿಗಳಲ್ಲಿ ಹೂಳು, ಕಸಕಡ್ಡಿ, ತ್ಯಾಜ್ಯಗಳು ತುಂಬಿ ನೀರು ಹರಿಯಲು ಜಾಗವಿಲ್ಲದೆ ಮುಖ್ಯ ರಸ್ತೆಯ ಮೇಲೆಯೇ ಹರಿಯುತ್ತಿದೆ. ಚರಂಡಿಗಳಲ್ಲಿರುವ ಕಸ ತ್ಯಾಜ್ಯ ಸಮೀಪದ ಮನೆಗಳ ಅಂಗಳಗಳನ್ನು ಸೇರುತ್ತಿದೆ. ನೀರು ರಸ್ತೆಯಲ್ಲೇ ಹರಿದು ಕೆಲವು ಕಡೆ ಬಿರುಕುಗಳು ಉಂಟಾಗಿವೆ. ಕೆಲವು ಪ್ರದೇಶದಲ್ಲಿ ರಸ್ತೆ ಕೆಳಗಡೆ ಇದ್ದು ಚರಂಡಿಗಳು ಮೇಲ್ಭಾಗದಲ್ಲಿವೆ. ಈ ರಸ್ತೆ ಹಾದು ಹೋಗುವ 4 ಗ್ರಾಮಗಳ ವ್ಯಾಪ್ತಿಯಲ್ಲಿ ಕಳೆದ ಬಾರಿ ಸಾಕಷ್ಟು ಡೆಂಗೆ ಪ್ರಕರಣಗಳು ವರದಿಯಾಗಿತ್ತು. ಇದಕ್ಕೆ ರಸ್ತೆ ಚರಂಡಿಗಳಲ್ಲಿ ನಿಲ್ಲುವ ನೀರು, ತ್ಯಾಜ್ಯ ಕೂಡ ಒಂದು ಕಾರಣವಾಗಿತ್ತು. ಇನ್ನು ವಾಹನ ಸವಾರರಿಗೆ ನಿತ್ಯ ಪರದಾಟ ತಪ್ಪಿಲ್ಲ. ಪಾದಚಾರಿಗಳಿಗೆ ಕೆಸರಿನ ಸಿಂಚನ ನಿತ್ಯ ನಿರಂತರವಾಗಿದೆ. ಅಲ್ಲಲ್ಲಿ ಮಣ್ಣು ಕೂಡ ರಸ್ತೆಯಲ್ಲಿ ನಿಂತು ಸಣ್ಣ-ಸಣ್ಣ ದಿಬ್ಬಗಳು ನಿರ್ಮಾಣವಾಗುತ್ತಿವೆ. ಕುಕ್ಕಾವು ಸೇತುವೆ ಬಳಿ ಹೊಂಡ ನಿರ್ಮಾಣವಾಗಿದ್ದು, ಮಳೆ ಸುರಿಯುವ ವೇಳೆ 2 ಅಡಿಯಷ್ಟು ನೀರು ರಸ್ತೆಯಲ್ಲೇ ನಿಲ್ಲುತ್ತಿದೆ.

- Advertisement -
spot_img

Latest News

error: Content is protected !!