ಚಿಕ್ಕಮಗಳೂರು : ಮೋಸ್ಟ್ ವಾಟೆಂಡ್ ಲಿಸ್ಟ್ ನಲ್ಲಿರುವ ನಕ್ಸಲ್ ನಾಯಕರು ಜ.8 ರಂದು (ಇಂದು) ಸಂಜೆ ಸಿಎಂ ಸಿದ್ದರಾಮಯ್ಯ ಅವರ ಮುಂದೆ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಆದ್ರೆ ಕಾಡಿನಿಂದ ನಾಡಿಗೆ ಬರುವಾಗ ಆರು ಜನ ನಕ್ಸಲರ ಕೈಯಲ್ಲಿ , ಬ್ಯಾಗ್ ನಲ್ಲಿ ಯಾವ ಬಂದೂಕುಗಳು ಪತ್ತೆಯಾಗಿಲ್ಲ ಎನ್ನಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮಘಟ್ಟದ ಕಾಡಿನಲ್ಲಿ ಬೆಳಗ್ಗಿನ ತಿಂಡಿಗಳನ್ನು ಮಾಡಿದ ಬಳಿಕ ಸಮಿತಿಯವರ ಜೊತೆ ಆರು ನಕ್ಸಲರಾದ ಮುಂಡಗಾರು ಲತಾ, ಸುಂದರಿ , ವನಜಾಕ್ಷಿ, ಜೀಷಾ, ಜಯಣ್ಣ ಅರೋಲಿ, ವಸಂತ್.ಕೆ ಕಾಡಿನಿಂದ ಹೊರ ಬರುತ್ತಿದ್ದಂತೆ ಚಿಕ್ಕಮಗಳೂರು ಜಿಲ್ಲಾ ಎಸ್ಪಿ ವಿಕ್ರಂ ಆಮಟೆ ಹಾಗೂ ಅಂತರಿಕ ಭದ್ರತಾ ಇಲಾಖೆಯ ಎಸ್ಪಿ ಹರಿರಾಮ್ ಶಂಕರ್ ನೇತೃತ್ವದ ಪೊಲೀಸರ ತಂಡ ಆರು ಜನರನ್ನು ಪರಿಶೀಲನೆ ಮಾಡಿ ಬಳಿಕ ಅವರ ಬಳಿ ಇದ್ದ ಬ್ಯಾಗ್ ಗಳನ್ನು ಪರಿಶೀಲನೆ ಮಾಡಿ ಕಾರಿನೊಳಗೆ ಹತ್ತಿಸಿದ್ದಾರೆ. ಆದ್ರೆ ಈ ವೇಳೆ ಯಾರ ಬಳಿ ಕೂಡ ಬಂದೂಕುಗಳು ಪತ್ತೆಯಾಗಿಲ್ಲ ಎಂದು ಪೊಲೀಸ್ ತಿಳಿಸಿವೆ.
ಮುಖ್ಯವಾಹಿನಿಗೆ ಬರುವಾಗ ತಮ್ಮಲ್ಲಿರುವ ಆಯುಧ, ಬಂದೂಕು ಒಟ್ಟಿಗೆ ಹಸ್ತಾಂತರ ಮಾಡಿ ಶರಣಾಗತಿಯಾಗಬೇಕು. ಆರು ಜನ ನಕ್ಸಲರು ಹಾಗಾದರೆ ಇಷ್ಟು ಸಮಯ ಬಂದೂಕು ಇಲ್ಲದೆ ಹೋರಾಟ ಮಾಡುತ್ತಿದ್ರಾ.? ವಿಕ್ರಂ ಗೌಡ ಎನ್ ಕೌಂಟರ್ ವೇಳೆ ಉಳಿದ ನಕ್ಸಲರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸುತ್ತಾ ಕಾಡಿನತ್ತ ಹೋಗಿದ್ದಾರೆ ಎಂದು ಹೇಳಿರುವುದು ಸುಳ್ಳಾ ಎನ್ನುವ ಪ್ರಶ್ನೆ ಕಾಡುತ್ತಿದೆ.