ಮಂಗಳೂರು: ಅತ್ಯಂತ ವೈಭವದಿಂದ ನಡೆಯುವ ಮಂಗಳೂರು ದಸರಾ ಉತ್ಸವಕ್ಕೆ ಈ ಬಾರಿಯೂ ಕರೋನಾ ಕರಿನೆರಳು ಕಾಡಿದೆ. ಹಾಗಾಗಿ “ನಮ್ಮ ದಸರಾ ನಮ್ಮ ಸುರಕ್ಷೆ” ಪರಿಕಲ್ಪನೆಯಲ್ಲಿ ಸಾಂಪ್ರದಾಯಿಕವಾಗಿ ಆಚರಿಸಲು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ.
ಕೊರೋನಾ ಹಿನ್ನೆಲೆಯಲ್ಲಿ ನಮ್ಮ ದಸರಾ ನಮ್ಮ ಸುರಕ್ಷೆ’ ಪರಿಕಲ್ಪನೆಯಲ್ಲಿ ದಸರಾ ಆಚರಿಸಲು ಭಕ್ತರಿಂದ ಅಭಿಪ್ರಾಯ ವ್ಯಕ್ತವಾಗಿತ್ತು. ಸರ್ಕಾರದ ಮಾರ್ಗಸೂಚಿ ಪಾಲಿಸಿ ಸರಳವಾಗಿ ಸಾಂಪ್ರದಾಯಿಕ ದಸರಾ ಮಹೋತ್ಸವ ನಡೆಸಲು ನಿರ್ಧರಿಸಲಾಗಿದೆ ಎಂದು ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಹೇಳಿದ್ದಾರೆ.
ಅನುಮತಿ ಸಿಕ್ಕಿದರೆ ಶೋಭಾಯಾತ್ರೆ?
ಮಂಗಳೂರು ದಸರಾದ 10 ದಿನಗಳ ಕಾಲ ದೇವಸ್ಥಾನವು ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸಲಿದೆ. ಆದರೆ ರಾಜಬೀದಿಗಳ ಅಲಂಕಾರ ಮತ್ತು ದೇವರ ನಗರ ಪ್ರದಕ್ಷಿಣೆ ಶೋಭಾಯಾತ್ರೆ ಆಯೋಜಿಸುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಒಂದು ವೇಳೆ ಸರ್ಕಾರ ಜಿಲ್ಲಾಡಳಿತ ಶೋಭಾಯಾತ್ರೆಗೆ ಅನುಮತಿ ನೀಡಿದರೆ ಶೋಭಾಯಾತ್ರೆ ಆಯೋಜಿಸಲು ಚಿಂತನೆ ನಡೆಸಲಾಗುವುದು. ಗಣಪತಿ, ಶಾರದೆ ಸಹಿತ ನವದುರ್ಗ, ಆದಿಮಾಯೆಯನ್ನು ಒಂಭತ್ತು ದಿನಗಳ ಕಾಲ ಪೂಜಿಸಿ, ವಿಜಯ ದಶಮಿಯಂದು ವಿಸರ್ಜನಾ ಪೂಜೆ ನಡೆದು ದೇವಳದ ಪುಷ್ಕರಣಿಯಲ್ಲಿ ಮೂರ್ತಿ ವಿಸರ್ಜನೆ ನಡೆಸಲು ನಿರ್ಧರಿಸಲಾಗಿದೆ.