Friday, June 5, 2026
Homeಕರಾವಳಿಉಡುಪಿಪೊಲೀಸರು ಬಂದ ನಂತರವೇ ಇಲ್ಲಿ ಜಾತ್ರೆ ಶುರು:  ಉತ್ಸವಕ್ಕೂ ಮುನ್ನ ಪೊಲೀಸರಿಗೆ ರಾಜಮರ್ಯಾದೆ: ಬ್ರಹ್ಮಾವರದಲ್ಲೊಂದು ವಿಶಿಷ್ಟ...

ಪೊಲೀಸರು ಬಂದ ನಂತರವೇ ಇಲ್ಲಿ ಜಾತ್ರೆ ಶುರು:  ಉತ್ಸವಕ್ಕೂ ಮುನ್ನ ಪೊಲೀಸರಿಗೆ ರಾಜಮರ್ಯಾದೆ: ಬ್ರಹ್ಮಾವರದಲ್ಲೊಂದು ವಿಶಿಷ್ಟ ಸಂಪ್ರದಾಯ

- Advertisement -
- Advertisement -

ಬ್ರಹ್ಮಾವರ: ವ್ಯಕ್ತಿಗೆ ಅಥವಾ ವ್ಯವಸ್ಥೆಗೆ ಭಯದಿಂದ ಗೌರವ ನೀಡೋದು ಬೇರೆ; ಪ್ರೀತಿಯಿಂದ ಗೌರವ ನೀಡೋದೇ ಬೇರೆ. ಉಡುಪಿಯ ಬ್ರಹ್ಮಾವರ ಜಾತ್ರೆಯಲ್ಲೊಂದು ವಿಶಿಷ್ಟ ಸಂಪ್ರದಾಯವಿದೆ. ಇಲ್ಲಿ ಪೋಲೀಸರು ಬಾರದೆ ರಥೋತ್ಸವ ಆರಂಭವಾಗಲ್ಲ. ಅವರನ್ನು ಅಕ್ಕರೆಯಿಂದ ಮೆರವಣಿಗೆಯಲ್ಲಿ ಕರೆತಂದ ನಂತರವೇ ಹಬ್ವದ ಸಂಭ್ರಮ ಕಳೆಕಟ್ಟೋದು!

ಉಡುಪಿಯ ಬ್ರಹ್ಮಾವರ ಮಹಾಲಿಂಗೇಶ್ವರ ಜಾತ್ರೆಯಲ್ಲಿ ಈ ಅಪರೂಪದ ಸಂಪ್ರದಾಯ ಪಾಲಿಸಲಾಗುತ್ತಿದೆ.ಬ್ಯಾಂಡು ವಾದ್ಯದ ನಡುವೆ ಊರಿನ ಗಣ್ಯರು ಸಕಲ ಗೌರವಗಳನ್ನು ಹೊತ್ತು ಪೊಲೀಸ್ ಠಾಣೆಗೆ ಬರುತ್ತಾರೆ. ಇದೇನು ಅಂತಿಂಥಾ ಮರ್ಯಾದೆಯಲ್ಲ, ರಾಜಮರ್ಯಾದೆ. ಉತ್ಸವದ ದಿನ ರಥ ಎಳೆಯುವ ಮುನ್ನ ದೇವಾಲಯದ ಆಡಳಿತ ವರ್ಗ, ಅರ್ಚಕರು ಗ್ರಾಮದ ಪೊಲೀಸ್ ಠಾಣೆಗೆ ಬರುತ್ತಾರೆ. ಅಲ್ಲಿನ ಪೊಲೀಸ್ ಅಧಿಕಾರಿಗಳಿಗೆ ಫಲಪುಷ್ಪ ನೀಡಿ ಉತ್ಸವಕ್ಕೆ ಬರುವಂತೆ ಆಹ್ವಾನ ನೀಡುತ್ತಾರೆ. ಬಳಿಕ ಮೆರವಣಿಗೆಯಲ್ಲಿ ಪೊಲೀಸ್ ಅಧಿಕಾರಿಗಳನ್ನು ದೇವಾಲಯಕ್ಕೆ ಕರೆದೊಯ್ಯುತ್ತಾರೆ. ಪೊಲೀಸರು ಬಂದ ಬಳಿಕವೇ ತೆಂಗಿನಕಾಯಿ ಒಡೆದು ಉತ್ಸವ ಆರಂಭವಾಗುತ್ತೆ.

ಹೆಚ್ಚಾಗಿ ಜಾತ್ರೆ ಅಂದ್ರೆ ಪೊಲೀಸರಿಗೆ ಕಾವಲು ಕಾಯೋ ಕೆಲಸ ಫಿಕ್ಸ್. ಆದ್ರೆ ಬ್ರಹ್ಮಾವರದಲ್ಲಿ ಮಾತ್ರ ಹಾಗಿಲ್ಲ. ಈ ಸಂಪ್ರದಾಯ ಎಂದು ಆರಂಭವಾಯ್ತೋ ಗೊತ್ತಿಲ್ಲ. ಆದರೆ ಪೊಲೀಸರಿಗೆ ಗೌರವ ನೀಡುವ ಮೂಲಕ ಕಾನೂನಿಗೆ ಗೌರವ ನೀಡುವ ಈ ಸಂಪ್ರದಾಯ ಬೇರೆಲ್ಲೂ ಕಾಣಸಿಗಲ್ಲ. ಏಳೆಂಟು ಗ್ರಾಮಗಳಿಗೆ ಈ ಮಹಾಲಿಂಗೇಶ್ವರ ದೇವರು ಒಡೆಯ. ದೇವರ ಉತ್ಸವ ಅಂದ್ರೆ ಸಾವಿರಾರು ಜನರು ಸೇರುತ್ತಿದ್ದ ಕಾಲದಲ್ಲಿ, ರಕ್ಷಣೆ ಕೊಟ್ಟು ಉತ್ಸವ ನಡೆಸಿದ ಪೊಲೀಸರಿಗೆ ಗೌರವ ನೀಡುವ ಸಲುವಾಗಿ ಈ ಕ್ರಮ ಬೆಳೆದುಬಂದಿರಬಹುದು. ಇಂದಿಗೂ ಈ ಪದ್ಧತಿಯನ್ನು ಸಂಪ್ರದಾಯದಂತೆ ಪಾಲಿಸಲಾಗುತ್ತೆ.

ಜಗತ್ತು ರಕ್ಷಿಸುವ ದೇವರ ಜಾತ್ರೆಯಲ್ಲಿ ಮಾನವರಿಗೆ ರಕ್ಷಣೆ ನೀಡುವ ಆರಕ್ಷಕರಿಗೆ ನೀಡುವ ಈ ಆತಿಥ್ಯ ನಿಜಕ್ಕೂ ಇಂಟರೆಸ್ಟಿಂಗ್ ಅಲ್ವಾ! ಗ್ರಾಮದ ನೆಮ್ಮದಿಗೆ ಹಗಲಿರುಳು ದುಡಿಯುವ ಪೊಲೀಸರಿಗೂ ಇದರಿಂದ ಏನೋ ಒಂದು ಸಾರ್ಥಕ ಅನುಭವ.

- Advertisement -

Latest News

error: Content is protected !!