ಮಂಗಳೂರು: “ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಜಿಲ್ಲಾ ಮಟ್ಟದ ಸಮಿತಿಗೆ 21 ಸದಸ್ಯರನ್ನು ನೇಮಕ ಮಾಡಲಾಗಿದೆ. ಈಗಾಗಲೇ ದಿವಾಳಿ ಸ್ಥಿತಿಗೆ ಬಂದಿರುವಂತಹ ರಾಜ್ಯ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಪ್ರತ್ಯೇಕ ಸಮಿತಿ ರಚಿಸಿ, ಅವರಿಗೆ ಗೌರವಧನ ನೀಡುವ ಮೂಲಕ ಜನರ ಹಣವನ್ನು ಪೋಲು ಮಾಡುತ್ತಿದೆ’ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಆರೋಪಿಸಿದರು.
ಅವರು ಬುಧವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಸಮಿತಿಯ ರಾಜ್ಯ ಅಧ್ಯಕ್ಷರಿಗೆ ಸಂಪುಟ ದರ್ಜೆಯ ಸ್ಥಾನ ಮಾನ ನೀಡಲಾಗಿದ್ದು, ಜಿಲ್ಲಾಧ್ಯಕ್ಷರಿಗೆ ತಿಂಗಳಿಗೆ ₹40 ಸಾವಿರ ಗೌರವಧನ, ಉಪಾಧ್ಯಕ್ಷರಿಗೆ ₹1,500, ಪ್ರತಿ ಸಭೆಗೆ ಸದಸ್ಯರಿಗೆ ₹1,100 ಗೌರವಧನ ನಿಗದಿಪಡಿಸಿದೆ. ಇದೇ ರೀತಿ ಪ್ರತಿ ತಾಲ್ಲೂಕು ಮಟ್ಟದಲ್ಲಿ ಸಮಿತಿ ರಚಿಸಲಾಗಿದ್ದು, ತಾಲ್ಲೂಕು ಸಮಿತಿ ಅಧ್ಯಕ್ಷರಿಗೆ ತಿಂಗಳಿಗೆ ₹25 ಸಾವಿರ ಗೌರವಧನ, ಸದಸ್ಯರಿಗೆ ಪ್ರತಿ ಸಭೆಯ ಹಾಜರಾತಿಗೆ ಗೌರವಧನ ನಿಗದಿಪಡಿಸಲಾಗಿದೆ. ಗ್ಯಾರಂಟಿ ಯೋಜನೆಗಳ ಹಣ ಪಾವತಿಯೇ ಬಾಕಿ ಇರುವಾಗ ಈ ರೀತಿ ಜನರ ದುಡ್ಡನ್ನು ಪೋಲು ಮಾಡುತ್ತಿದ್ದು, ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲವಾಗಿದ್ದು, ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರಿ ವ್ಯವಸ್ಥೆ ಇರುವಾಗ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದಿತ್ತು. ಬದಲಾಗಿ ಗ್ಯಾರಂಟಿ ಅನುಷ್ಠಾನ ಸಮಿತಿ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಸಾಕುವ ವೇದಿಕೆ ಸೃಷ್ಟಿಸಲಾಗಿದೆ’ ಎಂದು ಆರೋಪಿಸಿದರು.
“ಜನರಿಗೆ ನೆರೆ, ಬರ ಪರಿಹಾರವು ಗ್ಯಾರಂಟಿ ಯೋಜನೆಗಳ ಹೊಡೆತದಲ್ಲಿ ದೊರೆಯುತ್ತಿಲ್ಲ. ರಾಜ್ಯದಲ್ಲಿ ಜನಪರ ಆಡಳಿತ ಸ್ಥಗಿತಗೊಂಡಿದ್ದು, ಸರ್ಕಾರ ಕೋಮಾ ಸ್ಥಿತಿಯಲ್ಲಿದೆ. ಶಕ್ತಿ ಯೋಜನೆಯಿಂದ ಹಣ ಪಾವತಿ ಬಾಕಿ ಇದ್ದು, ಕೆಎಸ್ಆರ್ಟಿಸಿ ಮುಚ್ಚುವ ಸ್ಥಿತಿಯಲ್ಲಿದೆ. ಇನ್ನು ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ₹500 ಕೋಟಿ ಅನುದಾನ ನೀಡುವುದಾಗಿ ಹೇಳಿದ್ದ ರಾಜ್ಯ ಸರ್ಕಾರ, ಅಭಿವೃದ್ಧಿಗಾಗಿ ನಯಾಪೈಸೆಯನ್ನು ನೀಡಿಲ್ಲ’ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಪ ಬಿಜೆಪಿ ಪ್ರಮುಖರಾದ ಸಂಜಯ ಪ್ರಭು, ಪ್ರಸನ್ನಕುಮಾರ್ ಮಾರ್ತಾ, ವಿಕಾಸ್ ಪುತ್ತೂರು ಉಪಸ್ಥಿತರಿದ್ದರು.