ಉಪ್ಪಿನಂಗಡಿ: ಜೂ.24ರಂದು ಶಿರಾಡಿಯಲ್ಲಿ ಅಪಘಾತವಾದ ಲಾರಿಯ ಚಾಲಕನ ಮೃತದೇಹ ಹಳ್ಳದಲ್ಲಿ ಪತ್ತೆಯಾಗಿದೆ.
ಶಿರಾಡಿ ಗ್ರಾಮದ ಕೊಡ್ಯಕಲ್ಲು ಎಂಬಲ್ಲಿ ಹಳ್ಳದಲ್ಲಿ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿತ್ತು. ಇದೀಗ ಅದು ಜೂ.24ರಂದು ರಾತ್ರಿ ಕೊಡ್ಯಕಲ್ಲು ಬಳಿ ಪಲ್ಟಿಯಾಗಿದ್ದ ಲಾರಿಯ ಚಾಲಕ ಬೆಂಗಳೂರು ನೆಲಮಂಗಲ ನಿವಾಸಿ ಪ್ರೇಮ್ಕುಮಾರ್(45) ಅವರ ಮೃತದೇಹ ಎಂದು ಗೊತ್ತಾಗಿದೆ.
ಬೆಂಗಳೂರಿನಿಂದ ಮಂಗಳೂರಿಗೆ ವಿದ್ಯುತ್ ಟ್ರಾನ್ಸ್ಫಾರ್ಮರ್ಗಳನ್ನು ಸಾಗಿಸುತ್ತಿದ್ದ ಲಾರಿ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಕೊಡ್ಯಕಲ್ಲು ಎಂಬಲ್ಲಿ ಜೂ.24ರಂದು ತಡರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು.
ಘಟನೆಯಲ್ಲಿ ಲಾರಿ ಸಂಪೂರ್ಣ ಜಖಂಗೊಂಡಿದ್ದು ಚಾಲಕ ಪತ್ತೆಯಾಗಿರಲಿಲ್ಲ. ಈ ಮಧ್ಯೆ ಜೂ.26ರಂದು ಸಂಜೆ ಅಪಘಾತ ನಡೆದ ಸ್ಥಳದಿಂದ ಸುಮಾರು 200 ಮೀ.ದೂರದಲ್ಲಿ ಹಳ್ಳದಲ್ಲಿ ಅಪರಿಚಿತ ಗಂಡಸಿನ ಮೃತದೇಹ ಕವುಚಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತದೇಹದ ಬಲಬದಿ ಹಣೆಯಲ್ಲಿ ರಕ್ತ ಗಾಯ ಹಾಗೂ ಮೂಗಿನಲ್ಲಿ ರಕ್ತವು ಸೋರುತ್ತಿರುವುದು ಈ ವೇಳೆ ಕಂಡುಬಂದಿತ್ತು. ಈ ಮೃತದೇಹವನ್ನು ಮಂಗಳೂರು ದೇರಳಕಟ್ಟೆ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ನಾಪತ್ತೆಯಾಗಿದ್ದ ಲಾರಿ ಚಾಲಕ ಪ್ರೇಮ್ಕುಮಾರ್ ಕುಟುಂಬಸ್ಥರು ಜೂ.27ರಂದು ಆಸ್ಪತ್ರೆಗೆ ಆಗಮಿಸಿ ಮೃತದೇಹದ ಗುರುತು ಪತ್ತೆ ಹಚ್ಚಿದ್ದು, ಮೃತದೇಹವು ಲಾರಿ ಚಾಲಕ ಪ್ರೇಮ್ಕುಮಾರ್ರವರದ್ದು ಎಂದು ದೃಢಪಡಿಸಿದ್ದಾರೆ .