ಉಳ್ಳಾಲ: ಇಲ್ಲಿ ಎರಡು ಕಾರುಗಳ ನಡುವೆ ಸಣ್ಣ ಅಪಘಾತ ನಡೆದಿದ್ದು, ಅಪಘಾತದ ಬಳಿಕ ವಿಭಿನ್ನ ಕೋಮಿನ ಚಾಲಕರಿಬ್ಬರ ಮಧ್ಯೆ ಹೊಡೆದಾಟವಾಗಿದ್ದು, ಈ ಘಟನೆಯ ಬಗ್ಗೆ ಹೊಯ್ ಕೈ ಪ್ರಕರಣವು ಉಳ್ಳಾಲ ಠಾಣೆಯಲ್ಲಿ ದಾಖಲಾಗಿತ್ತು.
ಘಟನೆಯ ಕುರಿತಂತೆ ಠಾಣೆಗೆ, ಮಾತುಕತೆಗೆ ತೆರಳಿದ್ದ ಬಜರಂಗದಳ ಮುಖಂಡನ ಮೇಲೆ ಪೊಲೀಸ್ ಇನ್ಸ್ ಪೆಕ್ಟರ್ ಕೊಠಡಿಯೊಳಗೆ ಅನ್ಯಮತೀಯ ವ್ಯಕ್ತಿಯೊಬ್ಬ ಹಲ್ಲೆಗೈದ ಘಟನೆ ನಿನ್ನೆ ರಾತ್ರಿ ನಡೆದಿದ್ದು, ಈ ಘಟನೆಯಿಂದ ಕೆರಳಿದ ಹಿಂದೂ ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಿದರು. ಅರುಣ್ ಕುಮಾರ್ ಪುತ್ತಿಲ ನಡುರಾತ್ರಿಯಲ್ಲಿ ಪುತ್ತೂರಿನಿಂದ ಉಳ್ಳಾಲಕ್ಕೆ ಧಾವಿಸಿದ್ದು, ಆರೋಪಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.
ಉಳ್ಳಾಲ ಠಾಣೆಯ ಇನ್ಸ್ ಪೆಕ್ಟರ್ ಕೊಠಡಿಯೊಳಗಡೆ ಬಜರಂಗದಳದ ಉಳ್ಳಾಲ ಪ್ರಖಂಡ ಸಂಯೋಜಕ ಅರ್ಜುನ್ ಮಾಡೂರು ಅವರ ಮೇಲೆ ಹಲ್ಲೆಯಾಗಿದೆ. ಹಲ್ಲೆಮಾಡಿದ ವ್ಯಕ್ತಿ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಕಡಂಬಾರು ಸರಕಾರಿ ಶಾಲೆಯ ಬಳಿಯ ನಿವಾಸಿ ಮಹಮ್ಮದ್ ಆಸಿಫ್(33) ಎಂದು ತಿಳಿದು ಬಂದಿದೆ. ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ವಿವರ: ಅ.16 ಬುಧವಾರದಂದು ರಾತ್ರು 9.45ರ ವೇಳೆಗೆ ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ಕುಂಪಲದ ಶರತ್ ಹಾಗೂ ಕೇರಳದ ಇಬ್ರಾಹಿಂ ಖಲೀಲ್ ಅವರ ಕಾರುಗಳ ಮಧ್ಯೆ ಅಪಘಾತವಾಗಿದೆ. ಅಪಘಾತವಾದ ಸಂದರ್ಭದಲ್ಲಿ ಖಲೀಲ್ ಮತ್ತು ಆತನ ಸಹೋದರ ಅಸಿಫ್ ಅವರು ಶರತ್ ಎಂಬವರಿಗೆ ಕೈಯಲ್ಲಿ ಹಲ್ಲೆಗೈದಿದ್ದು, ಈ ಘಟನೆಯ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಶರತ್ ಅವರ ಪರಿಚಯದ ಅರ್ಜುನ್ ಮಾಡೂರು ಹಾಗೂ ಸ್ನೇಹಿತರೊಂದಿಗೆ ಉಳ್ಳಾಲ ಪೊಲೀಸ್ ಠಾಣೆಗೆ ರಾತ್ರಿ 11 ಗಂಟೆ ಸುಮಾರಿಗೆ ಭೇಟಿ ನೀಡಿದ್ದಾರೆ. ಕಾರು ಅಪಘಾತದ ಬಗ್ಗೆ ಇನ್ಸ್ ಪೆಕ್ಟರ್ ಕೊಠಡಿಯೊಳಗೆ ಕಾರು ಚಾಲಕರಾದ ಶರತ್, ಖಲೀಲ್ ಜತೆ ಮಾತುಕತೆ ನಡೆಸುತ್ತಿದ್ದ ವೇಳೆ ಏಕಾಏಕಿ ಒಳನುಗ್ಗಿದ ಆರೋಪಿ ಆಸಿಫ್, ಅರ್ಜುನ್ ಮಾಡೂರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮತ್ತೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಹಲ್ಲೆ ನಡೆಸುವ ಸಂದರ್ಭದಲ್ಲಿ ಅರ್ಜುನ್ ಸ್ನೇಹಿತರು ಆಸಿಫ್ ನನ್ನ ತಡೆದಿದ್ದು ಎಚ್ಚೆತ್ತ ಪೊಲೀಸರು ಕೂಡಲೇ ಆತನನ್ನ ಬಂಧಿಸಿದ್ದಾರೆ. ಘಟನೆಯ ದೃಶ್ಯಗಳು ಇನ್ಸ್ ಪೆಕ್ಟರ್ ಕೊಠಡಿಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಹಲ್ಲೆಗೊಳಗಾದ ಅರ್ಜುನ್ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಹಲ್ಲೆಗೈದ ಆರೋಪಿ ಆಸಿಫ್ ವಿರುದ್ಧ ಉಳ್ಳಾಲ ಠಾಣೆಗೆ ದೂರು ನೀಡಿದ್ದು ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಹಿಂದೂ ಕಾರ್ಯಕರ್ತರು ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಮಧ್ಯರಾತ್ರಿ ಠಾಣೆಯ ಮುಂದೆ ಜಮಾಯಿಸಿದ್ದಾರೆ ಎನ್ನಲಾಗಿದೆ. ಹಿಂದೂ ಮುಖಂಡ ಅರ್ಜುನ್ ಗೆ ಹಲ್ಲೆ ನಡೆಸಿದ ಆರೋಪಿ ಆಸಿಫ್ ನನ್ನ ತಮ್ಮ ವಶಕ್ಕೆ ಒಪ್ಪಿಸುವಂತೆ ಈ ಸಂದರ್ಭದಲ್ಲಿ ಆಗ್ರಹಿಸಿದ್ದು, ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಡಿಸಿಪಿ ಸಿದ್ಧಾರ್ಥ್ ಗೋಯಲ್, ಎಸಿಪಿ ಧನ್ಯ ನಾಯಕ್ ಅವರು ಠಾಣೆಯ ಸುತ್ತಲೂ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲ ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಮಧ್ಯರಾತ್ರಿ 1 ಗಂಟೆ ಉಳ್ಳಾಲ ಠಾಣೆಗೆ ಭೇಟಿ ನೀಡಿದ್ದಾರೆ. ಠಾಣೆಯ ಮುಂದೆ ಜಮಾಯಿಸಿದ್ದ ಹಿಂದೂ ಕಾರ್ಯಕರ್ತರು ಅರುಣ್ ಪುತ್ತಿಲ ಆಗಮಿಸುತ್ತಿದ್ದಂತೆ ಜೈಕಾರ ಘೋಷಣೆಗಳನ್ನ ಕೂಗಿದ್ದಾರೆ. ಇನ್ನು ಡಿಸಿಪಿ ಸಿದ್ಧಾರ್ಥ್ ಗೋಯಲ್ ಅವರನ್ನ ಅರುಣ್ ಪುತ್ತಿಲ, ಠಾಣೆಯೊಳಗೆ ನಡೆದ ಹಲ್ಲೆ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಆರೋಪಿ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಆಗ್ರಹಿಸಿದ್ದಾರೆ.
ಕಾರು ಅಪಘಾತದ ಸಂದರ್ಭದಲ್ಲಿ ನಡೆದ ಚಾಲಕರ ನಡುವಿನ ಗಲಾಟೆ ವಿಚಾರದಲ್ಲಿ ಇನ್ಸ್ ಪೆಕ್ಟರ್ ಬಾಲಕೃಷ್ಣ ಅವರ ಕೊಠಡಿಯೊಳಗಡೆ ಮಾತುಕತೆ ನಡೆಯುತ್ತಿದ್ದ ಸಂದರ್ಭ ಇನ್ಸ್ ಪೆಕ್ಟರ್ ಮೊಬೈಲ್ನಲ್ಲಿ ಮಾತನಾಡುತ್ತಾ ಕೋಣೆಯಿಂದ ಹೊರ ಹೋಗಿದ್ದಾರೆ. ಈ ವೇಳೆ ಆರೋಪಿ ಆಸಿಫ್ ಒಳನುಗ್ಗಿ ಅರ್ಜುನ್ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಇನ್ನು ಇನ್ಸ್ ಪೆಕ್ಟರ್ ಬಾಲಕೃಷ್ಣ ಅವರು ಠಾಣೆಗೆ ದೂರು ನೀಡಲು ಬಂದವರ ಸಮಸ್ಯೆಗಳನ್ನ ಸರಿಯಾಗಿ ಆಲಿಸದೇ ಮೊಬೈಲ್ ನಲ್ಲೇ ಹೆಚ್ಚಿನ ಕಾಲ ಕಳೆಯುತ್ತಿರುವುದರ ಬಗ್ಗೆ ಆರೋಪಗಳಿವೆ. ಠಾಣೆಯ ಒಳಗಡೆಯೇ ರಕ್ಷಣೆ ಇಲ್ಲದಿರುವುದರ ಬಗ್ಗೆ ಹಿಂದೂ ಕಾರ್ಯಕರ್ತರಿಂದ ಅಕ್ರೋಶ ವ್ಯಕ್ತವಾಗಿದೆ.