ಮಂಗಳೂರು; ಹೆತ್ತವರನ್ನು ನಿಂದಿಸಿದರು ಎಂದು ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಾಂತರಾಜು ಎಸ್.ವಿ ಆದೇಶ ನೀಡಿದ್ದಾರೆ. ಬಿಹಾರ ಮೂಲದ ಸನ್ನಿಬಾಬು ಮತ್ತು ಗಲ್ಲುರಾಮ ಯಾನೆ ಸಚಿನ್ ಶಿಕ್ಷೆಗೊಳಗಾದವರು.
ಆರೋಪಿಗಳು ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ನಾಡ್ ಗ್ರಾಮದ ವನಭೋಜನ ಎಂಬಲ್ಲಿ 2020ರ ಜನವರಿ 30ರಂದು ರಾತ್ರಿ 10ಕ್ಕೆ ಶರಣಪ್ಪ (31) ಎಂಬಾತನ ಕುತ್ತಿಗೆಗೆ ಚೂರಿಯಿಂದ ಚುಚ್ಚಿ ಕೊಲೆಗೈದಿದ್ದರು. ಶರಣಪ್ಪನು ಆರೋಪಿಗಳು ಮತ್ತವರ ಹೆತ್ತವರಿಗೆ ಅವಾಚ್ಯ ಶಬ್ದದಿಂದ ಬೈದಿದ್ದಾನೆ ಎಂದು ಕೋಪದಿಂದ ಈ ಕೊಲೆ ಕೃತ್ಯ ಎಸಗಿದ್ದರು ಎಂದು ಆರೋಪಿಸಲಾಗಿತ್ತು.
ಅಂದಿನ ಮುಲ್ಕಿ ಠಾಣೆಯ ಇನ್ಸ್ಪೆಕ್ಟರ್ ಜಯರಾಮ ಡಿ. ಗೌಡ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದು ಎಎಸ್ಐ ಉಮೇಶ್ ತನಿಖೆಗೆ ಸಹಕರಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಆರೋಪಿಗಳಿಗೆ ಸೆ.302 ಐಪಿಸಿ ಪ್ರಕಾರ ಜೀವಾವಧಿ ಶಿಕ್ಷೆ ಮತ್ತು ತಲಾ 10000 ದಂಡ, ಹಾಗೂ 341ಐಪಿಸಿ ಕಲಂ ಅಡಿಯಲ್ಲಿ 1 ತಿಂಗಳ ಸಾದಾ ಸಜೆ ಮತ್ತು ತಲಾ 500 ರೂ. ದಂಡ ವಿಧಿಸಿದ್ದಾರೆ. ಸರಕಾರದ ಪರವಾಗಿ ಅಭಿಯೋಜಕ ಮೊತಿಲಾಲ್ ಚೌದರಿ ವಾದ ಮಂಡಿಸಿದ್ದರು.