ಬಂಟ್ವಾಳ: ಬಜರಂಗದಳ ಕರೆ ನೀಡಿದ್ದ ಬಿ.ಸಿ. ರೋಡ್ ಚಲೋ ಮತ್ತು ಈದ್ ಮಿಲಾದ್ ಮೆರವಣಿಗೆಯಿಂದ ಉದ್ವಿಗ್ನಗೊಂಡಿದ್ದ ಬಿ.ಸಿ. ರೋಡ್ ನಿಂದ ಕೇವಲ ಇಪ್ಪತ್ತು ಕಿಲೋ ಮೀಟರ್ ದೂರದಲ್ಲಿ ಇಂದು ಹಿಂದೂ ಮತ್ತು ಮುಸ್ಲಿಂ ಭಾವೈಕ್ಯತೆ ಕಂಡುಬಂದಿದೆ.
ಬಂಟ್ವಾಳ ತಾಲೂಕಿನ ಮಾಣಿ ಜಂಕ್ಷನ್ ನಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಹಿಂದೂಗಳು ಸಿಹಿತಿಂಡಿ ವಿತರಣೆ ಮಾಡಿದ್ದಾರೆ.
ಈದ್ ಮಿಲಾದ್ ಮೆರವಣಿಗೆ ಸಾಗುತ್ತಿದ್ದ ವೇಳೆ ಕೇಸರಿ ಶಾಲು ಹಾಕಿಕೊಂಡು ಐಸ್ ಕ್ರೀಂ ಮತ್ತು ನೀರಿನ ಬಾಟಲ್ ಗಳನ್ನು ವಿತರಣೆ ಮಾಡಿ ಸೌಹಾರ್ದತೆ ಮೆರೆಯಲಾಗಿದೆ.ಇದೇ ವೇಳೆ, ಬಂಟ್ವಾಳ ತಾಲೂಕಿನ ಕೊಡಾಜೆಯಲ್ಲಿಯೂ ಐಕ್ಯ, ಭಾವೈಕ್ಯ ವೇದಿಕೆಯಿಂದ ಸಿಹಿ ತಿಂಡಿ ವಿತರಣೆ ಮಾಡಲಾಗಿದೆ.
ಕೊಡಾಜೆ ಜುಮ್ಮಾ ಮಸೀದಿಯಿಂದ ಬಂದಿದ್ದ ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಹಿಂದೂಗಳು ರಸ್ತೆ ಬದಿಯಲ್ಲಿ ನಿಂತು
ಸ್ವೀಟ್ ಬಾಕ್ಸ್ ವಿತರಿಸಿ ಹಬ್ಬದ ಶುಭಾಶಯ ಕೋರಿದ್ದಾರೆ.
ಇದೇ ವೇಳೆ, ಬಿ.ಸಿ. ರೋಡ್ ನಲ್ಲಿ ಹಿಂದೂ ಕಾರ್ಯಕರ್ತರು ಜಮಾಯಿಸಿ, ಈದ್ ಮಿಲಾದ್ ಮೆರವಣಿಗೆ ಬಳಿಕ ಏಕಾಏಕಿ ಮುಸ್ಲಿಂ ಯುವಕರು ಬೈಕ್ ರ್ಯಾಲಿ ನಡೆಸಿದ ಕಾರಣ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.