ಸುಳ್ಯ: ಸುಳ್ಯ ಎಸಿಎಫ್ ಪ್ರವೀಣ್ ಕುಮಾರ್ ಶೆಟ್ಟಿ ಅವರು ಬೆಳಗಾವಿಯಲ್ಲಿ ಮೂರು ದಿನಗಳ ಕಾಲ ನಡೆದ ಅರಣ್ಯ ಇಲಾಖೆ ನೌಕರರ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ನಾಲ್ಕು ಚಿನ್ನದ ಪದಕದೊಂದಿಗೆ ವೈಯಕ್ತಿಕ ಚಾಂಪಿಯನ್ ಆಗಿದ್ದಾರೆ.
ಹಿರಿಯರ ವಿಭಾಗದ ಶಾಟ್ ಪುಟ್, ಡಿಸ್ಕಸ್ ತ್ರೋ, ಹ್ಯಾಮರ್ ತ್ರೋ ಈ ಮೂರು ವಿಭಾಗದಲ್ಲಿ ಅವರು ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಇದರ ಅಂಕ ಆಧರಿಸಿ ಅವರಿಗೆ ವೈಯಕ್ತಿಕ ಚಾಂಪಿಯನ್ ಶಿಪ್ ಘೋಷಿಸಲ್ಪಟ್ಟಿತು.
ಪುತ್ತೂರು ನಗರದ ನಿವಾಸಿಯಾಗಿರುವ ಪ್ರವೀಣ್ ಕುಮಾರ್ ಶೆಟ್ಟಿ ಅವರು 1992 ರಲ್ಲಿ ಅರಣ್ಯ ಇಲಾಖೆಯಲ್ಲಿ ಫಾರೆಸ್ಟರ್ ಆಗಿ ನೇಮಕಾತಿ ಹೊಂದಿದವರು. ಬಳಿಕ ಆರ್ಎಫ್ಒ ಆಗಿ ಪದೋನ್ನತಿ ಹೊಂದಿ ಪಂಜ ಮತ್ತು ಬೆಳ್ತಂಗಡಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಮತ್ತೆ ಪದೋನ್ನತಿಹೊಂದಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಯಾಗಿ ಪ್ರಸ್ತುತ ಸುಳ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಾಲೇಜು ದಿನಗಳಿಂದಲೇ ಅತ್ಯುತ್ತಮ ಕ್ರೀಡಾಪಟುವಾಗಿ ಗುರುತಿಸಿಕೊಂಡಿರುವ ಅವರು ಅತ್ಯುತ್ತಮ ಕಬಡ್ಡಿಪಟುವಾಗಿ, ವಾಲಿಬಾಲ್ ಮತ್ತು ಕ್ರಿಕೆಟ್ ಆಟಗಾರನಾಗಿ ಗುರುತಿಸಲ್ಪಟ್ಟಿದ್ದಾರೆ. ಹಗ್ಗ ಜಗ್ಗಾಟದ ಬಲಿಷ್ಠ ತಂಡವನ್ನೂ ಹೊಂದಿರುವ ಅವರು ಉತ್ತಮ ಕ್ಷಮತೆ ಪ್ರದರ್ಶಿಸಿದ್ದಾರೆ. ಅತೀವ ಸಾಹಿತ್ಯಾಸಕ್ತಿ ಕೂಡ ಹೊಂದಿರುವ ಅವರು ಓರ್ವ ಜನಸ್ನೇಹಿ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ.