ಕಡಬ: ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಹರಿಹರ ಪಲ್ಲತಡ್ಕ ಗ್ರಾಮದ ಕಲ್ಲೆಮಠದ ಯುವತಿ ಹಾಗೂ ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಕುಂಬ್ಲಾಡಿಯ ಯುವಕ ಒಂದೇ ದಿನ ನಾಪತ್ತೆಯಾಗಿದ್ದಾರೆ. ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಲಾಗಿದೆ.
ಸುಬ್ರಹ್ಮಣ್ಯದ ಕೆ.ಎಸ್.ಆರ್.ಟಿ.ಸಿ ಬಸ್ ತಂಗುದಾಣದಲ್ಲಿ ಹೋಂ ಗಾರ್ಡ್ ಆಗಿದ್ದ ಅಭಿಲಾಷ್ ಹರಿಹರ ಹಾಗೂ ಕಲ್ಲೇಮಠದ ಯುವತಿ ಲಿಖಿತಾ ಅವರ ನಡುವೆ ಪ್ರೇಮಾಂಕುರವಾಗಿತ್ತು. ಜೂ. 3 ರಂದು ಮನೆಯಿಂದ ಕಾಣೆಯಾಗಿದ್ದ ಯುವತಿ ಲಿಖಿತಾ, ತಾನು ಇಷ್ಟ ಪಟ್ಟ ಹುಡುಗನೊಂದಿಗೆ ಹೋಗುವುದಾಗಿ ಪತ್ರ ಬರೆದಿಟ್ಟಿದ್ದಾಳೆ.
ಇತ್ತ ಅದೇ ದಿನ ಯುವಕ ಅಭಿಲಾಷ್ ಕೂಡ ಕಾಣೆಯಾಗಿದ್ದಾನೆ. 5 ದಿನಗಳ ಹಿಂದೆ ಯುವಕ ಹಾಗೂ ಯುವತಿ ಒಂದೇ ದಿನ ಕಾಣೆಯಾಗಿದ್ದು, ಮನೆಯವರು ಹುಡುಕಾಡಿದರೂ ಅವರಿಬ್ಬರು ಪತ್ತೆಯಾಗಲಿಲ್ಲ. ಯುವಕ ಹಾಗೂ ಯುವತಿ ಒಂದೇ ದಿನ ಕಾಣೆಯಾಗಿರುವುದರಿಂದ ಇವರಿಬ್ಬರು ಒಟ್ಟಿಗೆ ಹೋಗಿರಬಹುದೆಂದು ಹೇಳಲಾಗುತ್ತಿದೆ. ಈ ಬಗ್ಗೆ ಇಬ್ಬರ ಪೋಷಕರು ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.