ಸುಬ್ರಹ್ಮಣ್ಯ: ರಸ್ತೆ ಬದಿಯ ಮೈಲುಗಲ್ಲಿಗೆ ಕಾರು ಢಿಕ್ಕಿಯಾದ ಪರಿಣಾಮ ನಾಲ್ವರಿಗೆ ಗಾಯಗಳಾಗಿರುವ ಘಟನೆ ಸುಬ್ರಹ್ಮಣ್ಯ ಸಮೀಪದ ನಡುಗಲ್ಲು ಎಂಬಲ್ಲಿ ನಡೆದಿದೆ. ವಿಮಲಾ (55), ಚೈತ್ರಾ (30), ಶ್ರುತಿ (27) ಹಾಗೂ ಕಾರು ಚಾಲಕ ಉಮೇಶ್ ಗಾಯಗೊಂಡವರು.
ಇವರೆಲ್ಲರೂ ಸುಳ್ಯದಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ನಡುಗಲ್ಲು ಕಡೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮೈಲುಗಲ್ಲಿಗೆ ವೇಗವಾಗಿ ಢಿಕ್ಕಿ ಹೊಡೆದಿದ್ದು, ಬಳಿಕ ರಸ್ತೆಯಲ್ಲೇ ಪಲ್ಟಿಯಾಗಿದೆ.
ಅಪಘಾತ ಸಂಭವಿಸಿದ ತಕ್ಷಣ ಅದೇ ಹಾದಿಯಲ್ಲಿ ಹಿಂಬದಿಯಿಂದ ಬರುತ್ತಿದ್ದ ಛಾಯಾಗ್ರಾಹಕ ಸಂತೋಷ್ ಸುಬ್ರಹ್ಮಣ್ಯ ಅವರು ತಕ್ಷಣ ಕಾರು ನಿಲ್ಲಿಸಿ, ಸ್ಥಳೀಯರ ಸಹಕಾರದೊಂದಿಗೆ ಕಾರಿನೊಳಗೆ ಸಿಲುಕಿದ್ದ ಗಾಯಾಳುಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು. ಅಪಘಾತದಲ್ಲಿ ಗಾಯಗೊಂಡ ನಾಲ್ವರನ್ನು ಕೂಡಲೇ ಸುಳ್ಯದ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಘಟನೆಯಿಂದಾಗಿ ಕಾರು ಸಂಪೂರ್ಣ ಜಖಂಗೊಂಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


