ಸುಬ್ರಹ್ಮಣ್ಯ: ಹಳೆಯ ಬ್ರಹ್ಮರಥ ಇರುವ ಸ್ಥಳದ ಮರದ ಕೆಳಗೆ ಮಲಗಿದ್ದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತ ದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಸುಳ್ಯ ತಾಲೂಕು ಕೂತ್ಕುಂಜ ಗ್ರಾಮದ ಕಲ್ಕ ನಿವಾಸಿ ದೇವಿ ಪ್ರಸಾದ್ ಎಂದು ಗುರುತಿಸಲಾಗಿದೆ.
ಸುಮಾರು 17 ವರ್ಷಗಳ ಹಿಂದೆ ಪಡ್ಪಿನಂಗಡಿಯ ಯುವತಿ ಜೊತೆ ಮದುವೆಯಾಗಿ ಎರಡು ಮಕ್ಕಳೊಂದಿಗೆ ವಾಸವಿದ್ದು ತಾಯಿ ಮನೆ ತೊರೆದಿದ್ದ ಎನ್ನಲಾಗಿದೆ. ಇತ್ತೀಚೆಗೆ 4 ತಿಂಗಳ ಹಿಂದೆ ತನ್ನ ತಾಯಿಯನ್ನು ನೋಡಲು ಮನೆಗೆ ಬಂದು ನಂತರ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮನೆ ಬಿಟ್ಟು ಹೋಗಿದ್ದ. ಡಿ 11 ರಂದು ಸಂಬಂಧಿಕರ ಮೂಲಕ ಸುಬ್ರಹ್ಮಣ್ಯದಲ್ಲಿ ರಕ್ತ ವಾಂತಿ ಮಾಡಿಕೊಂಡು ಬಿದ್ದಿರುವ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಮೃತರ ತಾಯಿ ಸಹಿತ ಸಂಬಂಧಿಕರು ಬಂದಿದ್ದರು. ಸವಾರಿ ಮಂಟಪದ ಎದುರು ಇರುವ ಕುಕ್ಕೆಲಿಂಗ ಕಟ್ಟಡದ ಅಂಗಳದಲ್ಲಿ ಹಳೆಯ ಬ್ರಹ್ಮರಥ ಇರುವ ಸ್ಥಳದಲ್ಲಿ ಮರದ ಕೆಳಗೆ ಮಲಗಿದ್ದ ಸ್ಥಿತಿಯಲ್ಲಿ ಇದ್ದು ಮಗ ಮಲಗಿದ್ದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಕಂಡುಬರುತ್ತದೆ.
ವಿಪರೀತವಾಗಿ ಮದ್ಯಪಾನ ಸೇವನೆ ಮಾಡುವ ಅಭ್ಯಾಸವಿರುವುದಾಗಿ ಮೃತರ ತಾಯಿ ಲಕ್ಷ್ಮೀ ಎಂಬವರು ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಯುಡಿಆರ್ ನಂಬ್ರ: 37/2025 ಕಲಂ: 194(3)(IV) BNSS. ಯಂತೆ ಪ್ರಕರಣ ದಾಖಲಾಗಿರುತ್ತದೆ.


