ಶಿರ್ತಾಡಿ: ಇಂದು ಸ.ಕಿ.ಪ್ರಾ.ಶಾಲೆ, ಮಕ್ಕಿಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಗ್ರಾ.ಪಂ. ಶಿರ್ತಾಡಿಯ ಸದಸ್ಯರಾದ ಶ್ರೀ ಪ್ರವೀಣ್ ಕುಮಾರ್, ಶ್ರೀಮತಿ ಆಗ್ನೆಸ್ ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಬೇಬಿ ಇವರು ಉದಾರ ಕೊಡುಗೆಯಾಗಿ ನೀಡಿದ ಶಾಲಾ ಬ್ಯಾಗ್, ಪುಸ್ತಕ ಮತ್ತು ಲೇಖನ ಸಾಮಾಗ್ರಿ ವಿತರಣಾ ಕಾರ್ಯಕ್ರಮ ನಡೆಯಿತು.
ಪುಸ್ತಕ ಮತ್ತು ಲೇಖನ ಸಾಮಾಗ್ರಿ ವಿತರಿಸಿ ಮಾತನಾಡಿದ ಪ್ರವೀಣ್ ಕುಮಾರ್ ಅವರು, ಸರ್ಕಾರ ಮತ್ತು ಸಮುದಾಯ ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಎಲ್ಲಾ ವಿದ್ಯಾರ್ಥಿಗಳೂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಉತ್ತಮ ಪ್ರಜೆಗಳಾಗಬೇಕು ಎಂದರು.
ಶಿರ್ತಾಡಿ ಗ್ರಾ.ಪಂ.ಸದಸ್ಯರಾದ ಆಗ್ನೆಸ್ ಇವರು ಮಾತನಾಡಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರಗೆಳೆದು ದೇಶದ ಜವಾಬ್ದಾರಿಯುತ ಆಸ್ತಿಯನ್ನಾಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಮುಖೇಶ್ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹಶಿಕ್ಷಕಿ ಮಾನಸ ಸ್ವಾಗತಿಸಿ, ಮುಖ್ಯೋಪಾಧ್ಯಾಯಿನಿ ಬೇಬಿ ನಿರೂಪಿಸಿದರು. ಸಹಶಿಕ್ಷಕ ಗಣರಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿ, ವಂದಿಸಿದರು. ಎಲ್ಲಾ ಪೋಷಕರು, ಎಸ್.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಸದಸ್ಯರು ಭಾಗವಹಿಸಿದ್ದರು.