ಪುತ್ತೂರು: ನಗರದ ಖಾಸಗಿ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿಗೆ ಅದೇ ಕಾಲೇಜಿನ ಸಹಪಾಠಿ ವಿದ್ಯಾರ್ಥಿಯೋರ್ವ ಹರಿತವಾದ ಆಯುಧದಿಂದ ಇರಿದಿದ್ದು, ಇಬ್ಬರು ವಿದ್ಯಾರ್ಥಿಗಳು ಭಿನ್ನ ಸಮುದಾಯಕ್ಕೆ ಸೇರಿದ್ದು, ಈ ಹಿನ್ನೆಲೆಯಲ್ಲಿ ಎರಡೂ ತಂಡದ ಮುಖಂಡರು ಆಸ್ಪತ್ರೆ ಮುಂಭಾಗ ಜಮಾಯಿಸಿದ ಪರಿಣಾಮ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡ ಘಟನೆ ಆ. 20ರಂದು ಸಂಭವಿಸಿದೆ.
ಗಾಯಾಗೊಂಡ ವಿದ್ಯಾರ್ಥಿನಿ ಬನ್ನೂರಿನವಳಾಗಿದ್ದು, ವಿದ್ಯಾರ್ಥಿ ಕಬಕ ಸಮೀಪದವನು ಎನ್ನಲಾಗಿದೆ. ಒಂದೇ ಕಾಲೇಜಿನಲ್ಲಿ ಇಬ್ಬರೂ ಕಲಿಯುತ್ತಿದ್ದರೂ ಪರಸ್ಪರ ಪರಿಚಿತರಾಗಿರಲಿಲ್ಲ ಎನ್ನಲಾಗಿದೆ. ಇನ್ನು ಘಟನೆಗೆ ನಿಖರ ಕಾರಣವೇನೆಂದು ತಿಳಿದಿಲ್ಲ. ವಿಚಾರಣೆ ಬಳಿಕವಷ್ಟೇ ಕಾರಣ ಸ್ಪಷ್ಟವಾಗಲಿದೆ.
ಮಾಹಿತಿಯೊಂದರ ಪ್ರಕಾರ ಈ ಘಟನೆಯು ಬೆಳಗ್ಗೆ ಕಾಲೇಜು ಆರಂಭಕ್ಕೆ ಮೊದಲು ಪುತ್ತೂರು ಮುಖ್ಯ ಆಂಚೆ ಕಚೇರಿಯನ್ನು ಸಂಪರ್ಕಿಸುವ ರಸ್ತೆಯಲ್ಲಿ ವಿದ್ಯಾರ್ಥಿಗಳು ಬರುತ್ತಿರುವ ವೇಳೆ ನಡೆದಿದೆ ಎನ್ನಲಾಗಿದೆ. ಇಲ್ಲಿ ಇಬ್ಬರ ನಡುವೆ ಜಗಳ ಸಂಭವಿಸಿ ಅದು ತರಗತಿ ತನಕವೂ ಮುಂದುವರಿದಿದೆ ಎನ್ನಲಾಗಿದೆ. ಇನ್ನು ಇನ್ನೊಂದು ಮಾಹಿತಿ ಪ್ರಕಾರ, ಪ್ರಥಮ ಅವಧಿಯ ತರಗತಿಯಲ್ಲಿ ಇಬ್ಬರ ನಡುವೆ ಜಗಳ ಸಂಭವಿಸಿದ್ದು ಈ ವೇಳೆ ವಿದ್ಯಾರ್ಥಿ ಹರಿತವಾದ ವಸ್ತುವಿನಿಂದ ತಿವಿದಿದ್ದಾನೆ ಎನ್ನಲಾಗಿದೆ. ಆದರೆ ಕೆಲ ವಿದ್ಯಾರ್ಥಿಗಳ ಪ್ರಕಾರ ಆತ ತಿವಿದಿಲ್ಲ. ಗಾಯ ಹೇಗೆ ಸಂಭವಿಸಿದೆ ಅನ್ನುವುದೇ ಆಶ್ಚರ್ಯಕರ ಸಂಗತಿ ಎನ್ನುತ್ತಾರೆ.
ಇನ್ನು ಕಾಲೇಜಿನ ಉಪನ್ಯಾಸಕಿಯೋರ್ವರು ಗಾಯವು ಗಾಜು ತಗಲಿ ಆದದ್ದು ಎಂದು ಪೊಲೀಸರಿಗೆ ತಿಳಿಸುವಂತೆ ಹೇಳಿದ್ದಾರೆ ಎಂದು ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಈ ಉಪನ್ಯಾಸಕಿ ವಿರುದ್ಧ ಪ್ರಕರಣ ದಾಖಲಿಸಿ ಕಾಲೇಜಿನಿಂದ ಅಮಾನತು ಮಾಡುವಂತೆ ವಿದ್ಯಾರ್ಥಿನಿ ಪರ ಹಾಜರಿದ್ದ ಹಲವಾರು ಮಂದಿ ಆಗ್ರಹಿಸಿದ ಘಟನೆಯೂ ನಡೆಯಿತು.
ಪೊಲೀಸರ ವಶದಲ್ಲಿದ್ದ ವಿದ್ಯಾರ್ಥಿಯನ್ನು ವಿಚಾರಣೆಗೆ ಒಳಪಡಿಸಿದ ಸಂದರ್ಭ ಯಾವುದೇ ತಪ್ಪು ಕಂಡು ಬಾರದ ಹಿನ್ನೆಲೆಯಲ್ಲಿ ಪೊಲೀಸರು ವಿದ್ಯಾರ್ಥಿಯನ್ನು ರಾತ್ರಿ ಬಿಡುಗಡೆಗೊಳಿಸಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿನಿಗೆ ಹರಿತವಾದ ಆಯುಧದಿಂದ ಇರಿದ ಪ್ರಕರಣ ತಿರುವು ಪಡೆದುಕೊಂಡಿದ್ದು, ಹೀಗಾಗಿ ವಿದ್ಯಾರ್ಥಿನಿಯ ಕೈಯ ಮೇಲಿನ ಗಾಯದ ಬಗ್ಗೆ ಅನುಮಾನ ಮೂಡಿದೆ. ವಿದ್ಯಾರ್ಥಿನಿಯ ಕೈಗೆ ಗೀರಿದವರು ಯಾರು ಎನ್ನುವ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು ವಿದ್ಯಾರ್ಥಿನಿಯನ್ನು ಇನ್ನಷ್ಟು ತನಿಖೆಗೆ ಒಳಪಡಿಸುವ ಸಾಧ್ಯತೆ ಇದೆ ಎನ್ನುವ ವಿಚಾರ ತಿಳಿದು ಬಂದಿದೆ.