ಬೆಂಗಳೂರು: ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘಕ್ಕೆ ಹೆಚ್ಚಿನ ಸದಸ್ಯರನ್ನು ಸೇರ್ಪಡೆಗೊಳಿಸುವ ಮೂಲಕ ಕಾರ್ಯಕಾರಣಿ ಸಮಿತಿಯನ್ನು ರಾಜ್ಯಾದ್ಯಂತ ಬಲಪಡಿಸಲು ಕೈಗೊಳ್ಳಲಾಗುತ್ತಿರುವ ಕ್ರಮಗಳ ಅನುಷ್ಠಾನಕ್ಕೆ ಕೈಜೋಡಿಸುವಂತೆ ಕುಪ್ಮಾ ರಾಜ್ಯಾಧ್ಯಕ್ಷ ಡಾ. ಎಂ. ಮೋಹನ ಆಳ್ವ ಕರೆ ನೀಡಿದರು.
ಇಂದು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ನಡೆದ ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದ 2023 2024 ರ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಕುಪ್ಮಾ ಕಾರ್ಯಕಾರಿಣಿ ಸಮಿತಿಯನ್ನು ರಾಜ್ಯಾದ್ಯಂತ ಬಲಪಡಿಸುವ ಬಗ್ಗೆ ಮತ್ತು ಕುಪ್ಮಾಕ್ಕೆ ಸದಸ್ಯರನ್ನು ಸೇರ್ಪಡೆಗೊಳಿಸುವ ಬಗ್ಗೆ ನೂತನ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಕೇಂದ್ರ ಸಮಿತಿಯು ಕಾರ್ಯನಿರ್ವಹಿಸುತ್ತದೆ ಎಂದು ಮೋಹನ್ ಆಳ್ವ ಹೇಳಿದರು.
ಅಂತೆಯೇ, ಕುಪ್ಮಾದ ಸಮಸ್ಯೆಗಳನ್ನು ಸರ್ಕಾರದೊಂದಿಗೆ ಆರೋಗ್ಯಪೂರ್ಣವಾಗಿ ಬಗೆಹರಿಸಿಕೊಳ್ಳುವ ಬಗ್ಗೆ ಸಮನ್ವಯತೆ ಕಾಯ್ದಕೊಂಡು ಕುಪ್ಮಾ ಸಮಿತಿಯ ಎಲ್ಲಾ ಸದಸ್ಯರು ಕುಪ್ಮಾವನ್ನು ಬಲಪಡಿಸುವಲ್ಲಿ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದ ಡಾ. ಆಳ್ವ,ಖಾಸಗಿ ಪದವಿ ಪೂರ್ವ ಕಾಲೇಜುಗಳ ಸಮಸ್ಯೆಗಳನ್ನು ಸರ್ಕಾರವು ತಕ್ಷಣ ಬಗೆಹರಿಸಬೇಕೆಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಪ್ರೊ. ನರೇಂದ್ರ ಎಲ್. ನಾಯಕ್, ಬೆಂಗಳೂರು ಉತ್ತರ ಜಿಲ್ಲೆಯ ಅಧ್ಯಕ್ಷ ಕೀರ್ತನ್ ಕುಮಾರ್, ಬೆಂಗಳೂರು ಕುಪ್ಮಾ ಕಾರ್ಯದರ್ಶಿ ಡಾ. ದೇವರಾಜ್ ಬಿ ಕೆ, ಬೆಂಗಳೂರು ದಕ್ಷಿಣ ಜಿಲ್ಲೆಯ ಅಧ್ಯಕ್ಷ ಡಾ. ಜಯರಾಮ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.