ಗದಗ: ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಅಗ್ನಿಪಥ್ ಯೋಜನೆಯ ವಿರುದ್ಧ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಗದಗದಲ್ಲಿಯೂ ಪ್ರತಿಭಟನೆ ನಡೆದಿದ್ದು, 'ಯುವಕರ ಸಿಟ್ಟಿಗೆ ಅಗ್ನಿಪಥದೊಳಗ ಬೆಂದು ಹೋಗ್ತಿರಾ' ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ ಪಾಟೀಲ್ ಕಿಡಿಕಾರಿದ್ದಾರೆ.
ಪ್ರತಿಭಟನಾಕಾರರನ್ನು ಉದ್ಧೇಶಿಸಿ ಮಾತನಾಡಿದ ಎಚ್.ಕೆ. ಪಾಟೀಲ್, “ಅಗ್ನಿಪಥ್ ಯೋಜನೆಯ ಮೂಲಕ ಬಿಜೆಪಿ ಸರ್ಕಾರವು 17 ವರ್ಷಕ್ಕೆ ಯುವಕರನ್ನು ಮಿಲಿಟರಿಗೆ ಸೇರಿಸಿಕೊಂಡು, 23ನೇ ವಯಸ್ಸಿಗೆ ಹೊರಗೆ ಹಾಕಲು ಮುಂದಾಗಿದೆ. ಈ ಮೂಲಕ ಅವರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದೆ. ಅವರು ಸೇನೆಯಿಂದ ವಾಪಸ್ ಬಂದ ಮೇಲೆ ಸಿಪಾಯಿ ಮಾಡ್ತಿವಿ, ಡಿ ದರ್ಜೆ ನೌಕರಿ ಕೊಡ್ತೀವಿ, ಸೆಕ್ಯೂರಿಟಿ ಗಾರ್ಡ್ ಮಾಡ್ತೀವೆಂದು ಹುಸಿ ಭರವಸೆಗಳನ್ನು ನೀಡುತ್ತಿದೆ” ಎಂದು ಆರೋಪಿಸಿದ್ದಾರೆ.
“ನೀವು (ಮೋದಿ) ಅಧಿಕಾರಕ್ಕೆ ಬಂದ ಮೇಲೆ ಬಡವರ ಮಕ್ಕಳು ವಿದ್ಯಾಭ್ಯಾಸಕ್ಕೆ ತಕ್ಕ ಉದ್ಯೋಗ ಕೊಡಿ ಅಂದ್ರೆ, ಪಕೋಡ ಮಾರು, ಜಿಲೇಬಿ ಮಾರು ಅಂತ ಹೇಳಿದ್ರಿ, ಈಗ ಈ ಯೋಜನೆಯಿಂದ ಯುವಕರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿ, ಅವರ ಬದುಕನ್ನು ಹಾಳು ಮಾಡಲು ಹೊರಟ್ಟಿದ್ದಿರಾ” ಎಂದು ಪ್ರಧಾನಿ ವಿರುದ್ದ ಹರಿಹಾಯ್ದಿದ್ದಾರೆ.”ನೀವು ಇದನ್ನು ಹೀಗೆ ಮುಂದುವರೆಸಿದರೆ ಯುವಕರ ಸಿಟ್ಟಿಗೆ, ಆಕ್ರೋಶಕ್ಕೆ ಬಲಿ ಆಗ್ತೀರಾ. ಈ ಅಗ್ನಿಪಥದೊಳಗ ಬೆಂದು ಹೋಗ್ತಿರಾ..” ಎಂದು ಕೇಂದ್ರ ಸರಕಾರಕ್ಕೆ ಎಚ್.ಕೆ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
“ಕೆಲವು ಬಿಜೆಪಿಗರು ಉದ್ದಟತನದಿಂದ ಯುವಕರಿಗೆ ಅಗೌರವ ಆಗುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ‘ನಮ್ಮ ಬಿಜೆಪಿ ಕಛೇರಿಯಲ್ಲಿ ವಾಚ್ಮನ್ ಕೆಲಸ ಕೋಡ್ತೀವಿ. ಈ ವಾಚಮನ್ ಹುದ್ದೆಯು ಅಗೌರವದ ಕೆಲಸ ಅಲ್ಲ’ ಎನ್ನುವ ಮಾತುಗಳನ್ನು ಹೇಳಿ ಯುವಜನರ ದಾರಿ ತಪ್ಪಿಸಿ, ಅವರಿಗೆ ಅವಮಾನಿಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಪಾಟೀಲ್, “ರೈತರ ವಿರುದ್ಧ ಅನಾವಶ್ಯಕವಾಗಿ ಮೂರು ಕಾನೂನುಗಳನ್ನು ತಂದು ಅವರಿಗೆ ವಂಚಿಸಲು ಪ್ರಯತ್ನಿಸಿದಿರಿ. ಈಗ ಅಗ್ನಿಪಥ್ ಯೋಜನೆಯನ್ನು ತಂದು ಯುವಜನರಿಗೆ ಮಿಲಿಟರಿ ಬಾಗಿಲು ಮುಂಚಿಸುವ ಪ್ರಯತ್ನವನ್ನು ಮಾಡುತ್ತಿದ್ದೀರಿ. ಜನರಿಗೆ ಬೇಕಾಗಿದ್ದ ಯೋಜನೆಗಳನ್ನ ತರಲು ವಿಫಲರಾಗಿ, ಬೇಡವಾಗಿದ್ದನ್ನೇ ತರುತ್ತಿದ್ದೀರಿ” ಎಂದು ಕಿಡಿಕಾರಿದರು.