ಬೆಂಗಳೂರು: ಗೌರಿ ಗಣೇಶ ಹಬ್ಬಕ್ಕೆ ಅನುಮತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಇಂಧನ, ಲೋಕೋಪಯೋಗಿ, ಅಗ್ನಿಶಾಮಕ, ಪೊಲೀಸ್ ಮತ್ತು ಸ್ಥಳೀಯ ಸಂಸ್ಥೆಗಳ ಸಮನ್ವಯದೊಂದಿಗೆ ಆಯೋಜಕರಿಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರದ ಎಸಿಎಸ್ ರಜನೀಶ್ ಗೋಯೆಲ್ ಸುತ್ತೋಲೆ ಹೊರಡಿಸಿದ್ದಾರೆ.
ಗಣೇಶ ವಿಗ್ರಹ ಸ್ಥಾಪನೆಗೆ ಏಕಗವಾಕ್ಷಿ ಅಡಿಯಲ್ಲಿ ಪರವಾನಗಿ ನೀಡಲು ಸೂಚಿಸಲಾಗಿದ್ದು, ಕಾರ್ಯಕ್ರಮ ಆಯೋಜಕರು ಮುಂಚಿತವಾಗಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ.
ಅರ್ಜಿಯನ್ನು ಸಂಬಂಧಿಸಿದ ಇಲಾಖೆಗಳು ಜಂಟಿ ತಪಾಸಣೆ ಮಾಡಿ ಮೂರು ದಿನಗಳಲ್ಲಿ ನಿಯಮಾನುಸಾರ ಪರವಾನಗಿ ನೀಡಬೇಕು ಮತ್ತು ಪರವಾನಗಿ ನೀಡುವ ಮುನ್ನ ಆಯೋಜಕರಿಂದ ಕೋರ್ಟ್ ನಿರ್ದೇಶನ ಮತ್ತು ಸರ್ಕಾರದ ಇಲಾಖೆಗಳ ಸೂಚನೆ ಪಾಲನೆ ಬಗ್ಗೆ ಮುಚ್ಚಳಿಕೆ ಪಡೆಯಬೇಕಿದೆ.
ಅಗತ್ಯವಿರುವ ಕಡೆ ಸಿಸಿ ಕ್ಯಾಮರಾ ಅಳವಡಿಸಲು ಆಯೋಜಕರಿಗೆ ಸೂಚಿಸಬೇಕು ಮತ್ತು ಹೈ ಟೆನ್ಷನ್ ತಂತಿ ಹಾದು ಹೋಗಿರುವ ಕಡೆ ಅನುಮತಿ ನೀಡದಂತೆ ಎಲ್ಲಾ ಡಿಸಿ, ಎಸ್ಪಿ ಮತ್ತು ಪೊಲೀಸ್ ಆಯುಕ್ತರಿಗೆ ಸುತ್ತೋಲೆ ಮೂಲಕ ಸೂಚಿಸಲಾಗಿದೆ.