ಚಿಕ್ಕಮಗಳೂರು: ಬೆಂಗಳೂರಿನ ಡಿಜೆ ಹಳ್ಳಿ ಗಲಭೆಯ ಬೆನ್ನಲ್ಲಿಯೇ ವಿವಾದಿ ಎಸ್ಡಿಪಿಐ ಸಂಘಟನೆ ಹೆಸರಲ್ಲಿ ಮತ್ತೊಂದು ಪ್ರಚೋದನಾತ್ಮಕ ಕೃತ್ಯ ನಡೆದಿರುವ ಬಗ್ಗೆ ಶೃಂಗೇರಿಯ ಶಂಕರಾಚಾರ್ಯ ವೃತ್ತದಲ್ಲಿ ವರದಿಯಾಗಿದೆ.
ಶೃಂಗೇರಿಯಲ್ಲಿ ಶ್ರೀ ಶಂಕರರ ಪ್ರತಿಮೆಯ ಮೇಲೆ ಎಸ್ಡಿಪಿಐನ ಧ್ವಜ ನೆಟ್ಟು ಅಸಹಿಷ್ಣುತೆ ಮೆರೆಯಲಾಗಿದೆ. ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಹಿಂದೂ ಸಂಘಟನೆಗಳವರು ಆಕ್ರೋಶ ವ್ಯಕ್ತಪಡಿಸಿದರು.
‘ಶಂಕರಾಚಾರ್ಯರ ಪ್ರತಿಮೆ ಮೇಲೆ ಎಸ್ಡಿಪಿಐ ಬಾವುಟ ಹಾಕುತ್ತಾರೆ ಎಂದರೆ ಏನರ್ಥ. ಕೃತ್ಯ ಎಸಗಿರುವ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸಬೇಕು’ ಎಂದು ಬಿಜೆಪಿ ಮುಖಂಡ ಡಿ.ಎನ್.ಜೀವರಾಜ್ ಸಹಿತ ಇತರರು ಒತ್ತಾಯಿಸಿದರು. ಜೀವರಾಜ್ ಮತ್ತು ಪೊಲೀಸರ ಮಾತುಕತೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
‘ಶಂಕರಾಚಾರ್ಯರ ಪ್ರತಿಮೆ ಇರುವ ಗೋಪುರದ ಮೇಲೆ ಮುಸ್ಲಿಂ ಸಂಘಟನೆಯ ಬಾವುಟವನ್ನು ಅವಮಾನಕರವಾಗಿ ಹಾಕಲಾಗಿದೆ. ಎಸ್ಡಿಪಿಐ ಸದಸ್ಯರೇ ಇದನ್ನ ಹಾಕಿದ್ದಾರೆ. ಕೃತ್ಯ ಎಸಗಿದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು’ ಎಂದು ಶೃಂಗೇರಿಯ ಅರ್ಜನ್ ಎಂಬಾತ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಸಚಿವ ಸಿ.ಟಿ. ರವಿ ಮತ್ತು ಶಾಸಕ ಎಸ್.ಎ. ರಾಮದಾಸ್ ಅವರು ಟ್ವಿಟರ್ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.