ಮಂಗಳೂರು: ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾದ ಜನ ಭಾರತದತ್ತ ಧಾವಿಸಿ ಬರದಂತೆ ತಡೆಯಲು ಭಾರತ ಮತ್ತು ಶ್ರೀಲಂಕಾ ನೌಕಾಪಡೆಗಳು ಗಸ್ತು ಹೆಚ್ಚಿಸಿವೆ. ಹಾಗೇ ಶ್ರೀಲಂಕಾ ಪ್ರಜೆಗಳು ಸಮುದ್ರ ಮಾರ್ಗ ಮೂಲಕ ಅಕ್ರಮವಾಗಿ ನುಸುಳುವ ಸಾಧ್ಯತೆಯ ಬಗ್ಗೆ ಕರಾವಳಿ ಕಾವಲು ಪೊಲೀಸ್ ಠಾಣೆಯ ನಿರೀಕ್ಷಕರು ಎಚ್ಚರಿಕೆ ನೀಡಿದ್ದಾರೆ.
ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾದ ಪರಿಣಾಮ ಅರಾಜಕತೆ ಸೃಷ್ಟಿಯಾಗಿದೆ. ಪರಿಣಾಮ ಜನತೆ ಆಹಾರ ಪದಾರ್ಥಗಳಿಗೆ ಪರದಾಡುತ್ತಿದ್ದು, ದೊಂಬಿ, ಕಲಹಗಳಿಂದ ತತ್ತರಿಸುತ್ತಿದ್ದಾರೆ. ಆದ್ದರಿಂದ ಅಲ್ಲಿನ ಜನತೆ ಸಮುದ್ರ ಮಾರ್ಗ ಮುಖೇನ ಇನ್ನಿತರ ಮಾರ್ಗಗಳ ಮೂಲಕ ಭಾರತಕ್ಕೆ ನುಸುಳುವ ಸಾಧ್ಯತೆಯಿದೆ.
ಆದ್ದರಿಂದ ಅವರು ಕರಾವಳಿ ಭಾಗಗಳ ಗ್ರಾಮಗಳಿಗೆ ನುಸುಳಿ ವಾಸ್ತವ್ಯ ಹೂಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಅಪರಿಚಿತರಿಗೆ ಬಾಡಿಗೆ ಮನೆಕೊಡುವ ವೇಳೆ ಅವರ ಪೂರ್ವಾಪರ ಮಾಹಿತಿ ದಾಖಲೆಗಳನ್ನು ಪರಿಶೀಲನೆ ನಡೆಸಿಯೇ ಬಾಡಿಗೆ ನೀಡಬೇಕು. ಒಂದು ವೇಳೆ ನುಸುಳುಕೋರರೆಂದು ತಿಳಿದು ಬಂದಲ್ಲಿ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಕರಾವಳಿ ಕಾವಲು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.