ಬೆಂಗಳೂರು: ಆಂಬ್ಯುಲೆನ್ಸ್ ಸಿಗದೆ ಕೊರೊನಾದಿಂದ ಸಾವನ್ನಪ್ಪಿದ ತಾಯಿಯ ಶವವನ್ನು ಮಗನೊಬ್ಬ ಬೆಂಗಳೂರಿನಂದ ಮಂಡ್ಯದವರೆಗೂ ಆಟೋದಲ್ಲೇ ಕೊಂಡೊಯ್ದ ಹೃದಯವಿದ್ರಾವಕ ಘಟನೆ ನಡೆದಿದೆ.
ಮಹಾಮಾರಿ ಕೊರೊನಾ ಸೋಂಕಿಗೆ ತುತ್ತಾಗಿದ್ದ ತಾಯಿ ಶಾರದಮ್ಮ(73)ಳನ್ನು ಬದುಕಿಸಿಕೊಳ್ಳಲೇಬೇಕೆಂದು ಮಂಡ್ಯ ಜಿಲ್ಲೆ ಮಳವಳ್ಳಿಯಿಂದ ಬೆಂಗಳೂರಿಗೆ ತಾಯಿಯನ್ನ ಕರೆದುಕೊಂಡು ಮಗ ಶಿವಕುಮಾರ್ ಬಂದಿದ್ದರು. ಬೆಡ್ಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ್ದರು. ನನ್ನ ತಾಯಿಯನ್ನ ಉಳಿಸಿಕೊಡಿ ಎಂದಿ ಅಂಗಲಾಚಿದ್ದರು. ಕೊನೆಗೂ ಖಾಸಗಿ ಆಸ್ಪತ್ರೆಯೊಂದರಲ್ಲಿ ತಾಯಿಗೆ ಚಿಕಿತ್ಸೆ ಕೊಡಿಸಲು ದಾಖಲಿಸಿ ನಿಟ್ಟುಸಿರು ಬಿಟ್ಟರಾದರೂ ಆ ತಾಯಿ ಬದುಕಲಿಲ್ಲ.
ತಾಯಿಯನ್ನ ಕಳೆದುಕೊಂಡ ನೋವಿನಲ್ಲೇ ಶವವನ್ನು ಊರಿಗೆ ಕೊಂಡೊಯ್ಯಲು ಪರದಾಡುವ ದುಸ್ಥಿತಿ ಉಂಟಾಯಿತು. ಆಂಬುಲೆನ್ಸ್ಗಾಗಿ ಪರದಾಡಿದರೂ ಸಿಗಲಿಲ್ಲ. ಊರಿಗೆ ಮೃತದೇಹ ಕೊಂಡಯ್ಯಲೇಬೇಕೆಂದು ಪಣತೊಟ್ಟಿದ್ದಾರೆ ಶಿವಕುಮಾರ್.
ಆಟೋ ಚಾಲಕರೊಬ್ಬರ ಬಳಿ ಅಂಗಲಾಚಿದ. ಮಾನವೀಯತೆ ಮೆರೆದ ಆಟೋ ಚಾಲಕ ಶಗ ಸಾಗಿಲು ಒಪ್ಪಿದರು. ಕರೊನಾದಿಂದ ಶಾರದಮ್ಮ ಮೃತಪಟ್ಟಿದ್ದರೂ ಆಸ್ಪತ್ರೆಯವರು ಮೃತದೇಹಕ್ಕೆ ಪಿಪಿಇ ಕಿಟ್ ಅನ್ನೂ ಹಾಕದೆ ಶವ ಹಸ್ತಾಂತರಿಸಿದ್ದಾರೆ. ತಾಯಿ ಶವವನ್ನು ಆಟೋದಲ್ಲಿ ಮಲಗಿಸಲು ಸಾಧ್ಯವಾಗದೆ ಕೂರಿಸಿದ್ದಾರೆ. ಆಟೋದಲ್ಲಿ ಕುಲುಕಿ ಬೀಳದಂತೆ ಅಮ್ಮನ ತಲೆಯನ್ನು ಶಿವಕುಮಾರ್ ಎದೆಗೆ ಆನಿಸಿಕೊಂಡೇ ಪ್ರಯಾಣ ಬೆಳೆಸಿದ ದೃಶ್ಯ ಮನಕಲಕುವಂತಿತ್ತು.
ಇನ್ನು ರಾಜ್ಯಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಪೊಲೀಸರು ಅಲ್ಲಲ್ಲಿ ಆಟೋ ನಿಲ್ಲಿಸಿ ತಪಾಸಣೆ ಮಾಡಿದ್ದು, ಶಿವಕುಮಾರ್ ಅಸಹಾಯಕತೆ ಕಂಡು ಅವರೂ ಮರುಗಿದ್ದಾರೆ. ಮಂಡ್ಯದಿಂದ ಮಳವಳ್ಳಿಗೆ ಪೊಲೀಸರೇ ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.