ಮಂಗಳೂರು: ಕರಾವಳಿ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವಂತಹ ಅನೇಕ ಘಟನೆಗಳು ಒಂದರ ಹಿಂದೆ ಒಂದರಂತೆ ನಡೆಯುತ್ತಿದ್ದು, ಇದೀಗ ಮಂಗಳೂರು ನಗರದ ಹೊರವಲಯದ ಕೊಣಾಜೆಯಲ್ಲಿ ಇಂತಹದೊಂದು ಅಮಾನುಷ ಘಟನೆ ನಡೆದಿದೆ.
ಕಂಬಳಪದವಿನ ಎಂ.ಕೆ ಫ್ಲೈ ಬೋರ್ಡ್ ಮಿಲ್ ನ ಪರಿಸರದಲ್ಲಿರುವ ಮುಚ್ಚಿರಕಲ್ಲು ಗುಳಿಗ ದೈವದ ಕಟ್ಟೆಯ ಮೇಲೆ ಚಪ್ಪಲಿಯನ್ನು ಎಸೆದು ಶ್ರೀಸಾನಿಧ್ಯವನ್ನು ಅಪವಿತ್ರ ಮಾಡಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಹಲವು ದಶಕಗಳಿಂದ ಶ್ರದ್ಧಾ ಭಕ್ತಿಯಿಂದ ಪೂಜಿಸಿಕೊಂಡು ಬರುತ್ತಿರುವ ಈ ಕಾರಣಿಕದ ಕಟ್ಟೆಯ ಮೇಲೆ ನಿನ್ನೆ ರಾತ್ರಿ ಚಪ್ಪಲಿ ಇಟ್ಟಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಮುಚ್ಚಿರಕಲ್ಲು ಕ್ಷೇತ್ರದ ಆಡಳಿತ ಸಮಿತಿಯ ಪ್ರಮುಖರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಧಾರ್ಮಿಕ ಸ್ಥಳದಲ್ಲಿ ಯಾರಾದರೂ ಉದ್ದೇಶ ಪೂರ್ವಕವಾಗಿ ಚಪ್ಪಲಿ ಎಸೆದಿದ್ದರೇ ಅಥವಾ ಯಾವುದಾರೂ ಪ್ರಾಣಿಗಳು ಹೊತ್ತು ತಂದಿರುವ ಸಾಧ್ಯತೆ ಇರಬಹುದೇ ಎಂದು ಪೋಲೀಸರ ವಸ್ತು ನಿಷ್ಠ ತನಿಖೆಯ ಮುಖಾಂತರ ತಿಳಿದುಬರಬೇಕಾಗಿದೆ.