ಮಂಗಳೂರು: ಹಾವು ಎಂದಾಕ್ಷಣ ಭಯ ಬೀಳೋದೇ ಜಾಸ್ತಿ. ಆದರೆ, ಈ ಯುವತಿಗೆ ಹಾವು ಅಂದ್ರೆ ಬಲು ಪ್ರೀತಿ. ನಗರದಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿರುವ ಈ ವಿದ್ಯಾರ್ಥಿನಿ ಯಾವ ಹೆದರಿಕೆಯೂ ಇಲ್ಲದೆ 100ಕ್ಕೂ ಅಧಿಕ ವಿಷದ ಹಾವುಗಳನ್ನು ಹಿಡಿದು ರಕ್ಷಣೆ ಮಾಡಿದ್ದಾರೆ.
ಹೌದು. ಮಂಗಳೂರು ನಗರದ ಅಶೋಕನಗರ ನಿವಾಸಿ, ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್ಸಿ ಓದುತ್ತಿರುವ ಶರಣ್ಯ ಭಟ್ ಈ ಯುವತಿ. ಎಲ್ಲೇ ವಿಷದ ಹಾವಿರುವ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ತೆರಳಿ ಹಾವನ್ನು ಹಿಡಿದು ಕಾಡಿಗೆ ಬಿಡುತ್ತಾರೆ. ಕನ್ನಡಿ ಹಾವು, ಹೆಬ್ಬಾವು, ಕಟ್ಟ ಹಾವು, ಕೇರೆ ಹಾವು, ನೀರೊಳ್ಳೆ ಸೇರಿದಂತೆ ನಾನಾ ಜಾತಿಯ ಹಾವುಗಳನ್ನು ಹಿಡಿದ ಹೆಗ್ಗಳಿಕೆ ಇವರದ್ದು. ಶರಣ್ಯ ಭಟ್ ಗೆ ಹಾವುಗಳ ಬಗ್ಗೆ ಇರುವ ಆಸಕ್ತಿ ಕಂಡ ಗೆಳತಿಯರು 2 ವರ್ಷಗಳ ಹಿಂದೆ ಬಿಜೈ ಬಳಿ ಕನ್ನಡಿ ಹಾವು ಕಂಡಾಗ ಕರೆ ಮಾಡಿ ತಿಳಿಸಿದ್ದರು.
ತಕ್ಷಣ ಅಲ್ಲಿಗೆ ಧಾವಿಸಿ ಮೊದಲ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. 2 ವರ್ಷಗಳಿಂದ ಹಾವು ರಕ್ಷಣೆ ಕಾರ್ಯದಲ್ಲಿ ಶರಣ್ಯ ತೊಡಗಿದ್ದು, ಹಾವು- ಕಪ್ಪೆಗಳ ಪ್ರಭೇದದ ಬಗ್ಗೆಯೂ ಅಧ್ಯಯನ ಮಾಡುತ್ತಿದ್ದಾರೆ. ನಾಗರ ಸಹಿತ ವಿಷದ ಹಾವು ಹಿಡಿಯುವ ಬಗ್ಗೆ ಉಜಿರೆಯ ಸ್ನೇಕ್ ಜಾಯ್ ತರಬೇತಿ ನೀಡಿದರೆ, ಅಶೋಕನಗರದ ಉರಗ ತಜ್ಞ ಅತುಲ್ ಪೈ ಸಾಥ್ ನೀಡುತ್ತಿದ್ದಾರೆ. ಕಪ್ಪೆಗಳ ಪ್ರಭೇದ ಬಗ್ಗೆ ಮಂಗಳೂರಿನ ಡಾ. ವಿನೀತ್ ಕುಮಾರ್ ಮತ್ತು ಹಾವುಗಳ ಬಗ್ಗೆ ಡಾ. ವರದಗಿರಿ ಮುಂಬಯಿ ಮಾರ್ಗದರ್ಶನ ನೀಡುತ್ತಿದ್ದಾರೆ.