ಮಂಗಳೂರು : ಮೀನುಗಾರಿಕಾ ದಕ್ಕೆಯಲ್ಲಿ ಕಾರ್ಮಿಕನ ತಲೆ ಕೆಳಗಾಗಿಸಿ ಕೈ ಕಾಲು ಕಟ್ಟಿ ಹಲ್ಲೆ ನಡೆಸಿದ ಅಮಾನವೀಯ ದೌರ್ಜನ್ಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕೊಂಡೂರು ಪೋಲಯ್ಯ , ಅವುಲ ರಾಜ್ ಕುಮಾರ್ , ಕಾಟಿಂಗರಿ ಮನೋಹರ್, ವುಟುಕೋರಿ ಜಾಲಯ್ಯ, ಕರಪಿಂಗಾರ ರವಿ, ಪ್ರಲಯಕಾವೇರಿ ಗೋವಿಂದಯ್ಯ ಎಂದು ಗುರುತಿಸಲಾಗಿದೆ.
ಡಿಸಂಬರ್ 14 ರಂದು ರಾತ್ರಿ ಮಂಗಳೂರು ದಕ್ಕೆಯಲ್ಲಿ ಮೀನುಗಾರಿಕೆ ಕೆಲಸ ಮಾಡುತ್ತಿರುವ ಆಂದ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕಾಟಮ್ಹಾರಿ ಪಾಲೆಮ್ ನಿವಾಸಿ ವೈಲ ಶೀನು ( 32) ಎಂಬಾತ ಮಂಗಳೂರು ದಕ್ಕೆಯಲ್ಲಿ ನಿಲ್ಲಿಸಿದ್ದ ಜಾನ್ ಶೈಲೆಶ್ 2 ” ಎಂಬ ಬೋಟಿಗೆ ಹೋಗಿ ವಾಪಾಸು ತಾನು ಕೆಲಸ ಮಾಡುವ ಬೋಟಿನಲ್ಲಿ ಮಲಗಿದ್ದ.
ಮಾರನೇ ದಿನ ಜಾನ್ ಶೈಲೇಶ್ 2 ಬೋಟಿನಲ್ಲಿ ಕೆಲಸ ಮಾಡುತ್ತಿರುವ ಆರು ಜನ ಆರೋಪಿಗಳು ವೈಲಾ ಶೀನು ಬಳಿಗೆ ಬಂದು ನಿನ್ನೆ ರಾತ್ರಿ ಬೋಟಿಗೆ ಬಂದು ಮೊಬೈಲ್ ಕಳ್ಳತನ ಮಾಡಿದ್ದೀಯಾ ಎಂದು ಹೇಳಿ ವೈಲಾ ಶೀನುನನ್ನು ಅಪಹರಿಸಿಕೊಂಡು ಆತನ ಕೈ ಕಾಲುಗಳನ್ನು ಕಟ್ಟಿ ಹಾಕಿ ಬೋಟ್ ನ ಕ್ರೇನ್ಗೆ ಕಟ್ಟಿ ಹಾಕಿ ಮರದ ರೀಪಿನಿಂದ ಹಾಗೂ ಕಬ್ಬಿಣದ ಸರಳವಳಿಯಿಂದ ಹಲ್ಲೆ ನಡೆಸಿ ಕೊಲೆ ನಡೆಸಲು ಪ್ರಯತ್ನಿಸಿದ್ದಾರೆ.
ಆರೋಪಿಗಳು ವೈಲಾ ಶೀನುವಿನ ಕಾಲುಗಳನ್ನು ಕಟ್ಟಿ, ಸಮುದ್ರಕ್ಕೆ ಬಿಸಾಡಿ ಕೊಲೆ ನಡೆಸಲು ಮಾತುಕತೆ ನಡೆಸಿದ್ದರು ಆ ಸಮಯ ಸಾರ್ವಜನಿಕರು ಬಂದು ವೈಲಾ ಶೀನುವನ್ನು ರಕ್ಷಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಅಪಹರಣ ಹಾಗೂ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದೆ. ಕೃತ್ಯಕ್ಕೆ ಬಳಸಿಕೊಂಡ ಮರದ ರೀಪು, ಕಬ್ಬಿಣದ ಸರಪಳಿ ಹಗ್ಗ ಹಾಗು ಮೊಬೈಲ್ ಹ್ಯಾಂಡ್ ಸೆಟ್ ಅನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ.