ಸಿಆರ್ ಝಡ್ ಪ್ರದೇಶದಲ್ಲಿ ತೆಗೆದಿರುವ ಮರಳನ್ನು ಮಾರಾಟ ಮಾಡುವಂತೆ ಇಲ್ಲ ಎಂದು ರಾಷ್ಟ್ರೀಯ ಹಸಿರು ಪೀಠ ಆದೇಶ ಮಾಡಿದೆ. ಕರಾವಳಿ ಜಿಲ್ಲೆಗಳಲ್ಲಿ ಮರಳುಗಾರಿಕೆ ಸಂಬಂಧ ಇದೊಂದು ಮಹತ್ವದ ಆದೇಶವಾಗಿದೆ. ಚೆನ್ನೈನಲ್ಲಿರುವ ರಾಷ್ಟ್ರೀಯ ಹಸಿರು ಪೀಠದ ದಕ್ಷಿಣ ವಿಭಾಗದ ನ್ಯಾಯಾಂಗ ಸದಸ್ಯ ಕೆ ರಾಮಕೃಷ್ಣನ್, ತಜ್ಞ ಸದಸ್ಯ ಡಾ.ಸತ್ಯ ಗೋಪಾಲ ಕೊರ್ಲಪಾಟಿ ಅವರುಗಳಿದ್ದ ಪೀಠವು ಈ ಆದೇಶ ಮಾಡಿದೆ. ಪರ್ಮಿಟ್ ಪ್ರಕ್ರಿಯೆ ರಾಜಧನ ಸಂಗ್ರಹ , ಹೊರಗಡೆ ಮರಳು ಮಾರಾಟಕ್ಕೆ ಅನುಮತಿ ನೀಡಿರುವ ರಾಜ್ಯ ಸರಕಾರದ ನಿಯಮಾವಳಿಯೂ ಕೂಡ ಸಿಆರ್ ಝಡ್ ಅಧಿಸೂಚನೆಯಲ್ಲಿ ನಿಷೇಧಿಸಲಾದ ಮರಳುಗಾರಿಕೆಗೆ ಸಮವಾಗಿದೆ ಎಂದಿದೆ.
ಸಿಆರ್ ಝಡ್ ಪ್ರದೇಶದಲ್ಲಿ ಮರಳನ್ನು ತೆಗೆಯುವುದೇ ಆದರೆ ಅದನ್ನು ಮಾರಾಟ ಮಾಡುವಂತಿಲ್ಲ .ತೆಗೆದಿರುವ ಮರಳನ್ನು ಕೇವಲ ನದಿ ಪಾತ್ರವನ್ನು ಸಮತಟ್ಟು ಮಾಡಲು ಅಥವಾ ನದಿಪಾತ್ರದ ದಂಡೆ ಗಟ್ಟಿಗೊಳಿಸಲು ಬಳಸಬೇಕು ಎಂದು ಸೂಚನೆ ನೀಡಲಾಗಿದೆ. ಪರವಾನಿಗೆ ಹೊಂದಿರುವವರು ಅಥವಾ ಅವರ ಕುಟುಂಬದ ಸದಸ್ಯರು ಮಾತ್ರ ಕಟ್ಟುನಿಟ್ಟಾಗಿ ಸಾಂಪ್ರದಾಯಿಕ ವಿಧಾನಗಳನ್ನು ಮಾತ್ರ ಬಳಸಿ ಮರಳು ತೆಗೆಯಬೇಕು. ಯಾವುದೇ ಉಪಗುತ್ತಿಗೆ ಅಥವಾ ಬಾಹ್ಯ ಕಾರ್ಮಿಕರ ನಿಯೋಜನೆ ಇರಬಾರದು ಎಂಬುದನ್ನು ಪೀಠವು ಸ್ಪಷ್ಟಪಡಿಸಿದೆ.
ಜಿಲ್ಲೆಯಲ್ಲಿ ಸಿ ಆರ್ ಝಡ್ ವ್ಯಾಪ್ತಿಯಲ್ಲಿ 23 ಮರಳು ದಿಬ್ಬಗಳನ್ನು ಗುರುತಿಸಿ ರಾಜ್ಯ ಕರಾವಳಿ ನಿಯಂತ್ರಣ ವಲಯ ಪ್ರಾಧಿಕಾರ ಅನುಮೋದನೆ ನೀಡಿತ್ತು. ಅದರಲ್ಲಿ ನಾಲ್ಕು ಮರಳು ದಿಬ್ಬಗಳು ಕುಂದಾಪುರ ವ್ಯಾಪ್ತಿಯಲ್ಲಿದ್ದು ಅದರ ಪರವಾನಿಗೆ ಅವಧಿ ಪೂರ್ಣಗೊಂಡಿದೆ. ಉಳಿದಂತೆ ಪ್ರಸ್ತುತ ಉಡುಪಿ ಬ್ರಹ್ಮಾವರ ಭಾಗದಲ್ಲಿ 13 ಮರಳು ದಿಬ್ಬಗಳಲ್ಲಿ ಮರಳನ್ನು ತೆರವುಗೊಳಿಸಲಾಗುತ್ತಿದೆ. ಸಿಆರ್ ಝಡ್ ವ್ಯಾಪ್ತಿಯ ಮರಳು ತೆಗೆಯುವ ವಿಚಾರವಾಗಿ ಹಸಿರುಪೀಠ ನೀಡಿದ ಆದೇಶದ ಪ್ರಮಾಣಿಕೃತ ಪ್ರತಿಯನ್ನು ಪಡೆದು ಕೊಳ್ಳಬೇಕು. ಈ ಆದೇಶವನ್ನು ಜಿಲ್ಲಾ ಆಡಳಿತ ಕಟ್ಟುನಿಟ್ಟಾಗಿ ಪಾಲಿಸುತ್ತೆ. ಈ ಬಗ್ಗೆ ಗಣಿ ಇಲಾಖೆಯ ಅಧಿಕಾರಿಗಳಿಗೂ ಸ್ಪಷ್ಟ ಸೂಚನೆಯನ್ನು ನೀಡಿದ್ದೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ