ಕೋಟ: ತಾಲೂಕಿನ ಕೋಟದಲ್ಲಿ ಕೊರಗ ಸಮುದಾಯದ ಯುವಕನ ಮನೆಯಲ್ಲಿ ಮೆಹೆಂದಿ ಕಾರ್ಯಕ್ರಮದಲ್ಲಿ ನಡೆದ ಲಾಠಿ ಪ್ರಹಾರಕ್ಕೆ ಪೊಲೀಸರು ಪ್ರತಿದೂರು ದಾಖಲಿಸಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಟ ಠಾಣೆಯ ಪೊಲೀಸ್ ಪೇದೆ ಜಯರಾಮ್ ಅವರು ಮದುಮಗ ಮತ್ತು ಇತರರು ಮರದ ದಿಮ್ಮಿಗಳಿಂದ ಥಳಿಸಿದ್ದಾರೆ ಎಂದು ಆರೋಪಿಸಿ ಪ್ರತಿದೂರು ದಾಖಲಿಸಿದ್ದರು. ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಅವರು ಸಂತ್ರಸ್ತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ತಕ್ಷಣ ಈ ದೂರು ದಾಖಲಿಸಲಾಗಿದೆ.
ಸಮಾಜ ಕಲ್ಯಾಣ ಸಚಿವ ಶ್ರೀನಿವಾಸ ಪೂಜಾರಿ ಕೂಡ ಪೊಲೀಸ್ ಲಾಠಿ ಪ್ರಹಾರ ನಡೆದ ಮನೆಗೆ ಭೇಟಿ ನೀಡಿ ಸಂತ್ರಸ್ತರನ್ನು ಸಮಾಧಾನಪಡಿಸಿದರು. ಆದರೆ, ಗಣ್ಯರು ಸ್ಥಳದಿಂದ ತೆರಳುತ್ತಿದ್ದಂತೆ ಕೊರಗ ಕಾಲೋನಿ ನಿವಾಸಿಗಳು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಪೇದೆ ಪ್ರತಿ ದೂರು ದಾಖಲಿಸಿದ್ದಾರೆ.
ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ ಈ ಘಟನೆಗೆ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿ, ಪೊಲೀಸರ ಈ ಕೃತ್ಯ ಪೊಲೀಸರಿಗೆ ಹಾಗೂ ಸರ್ಕಾರಕ್ಕೆ ನಾಚಿಕೆಗೇಡು. ಅಸಹಾಯಕ ಕೊರಗ ಸಮುದಾಯದ ಜನರ ಮೇಲೆ ನೀಡಿರುವ ದೂರನ್ನು ಕಾನ್ಸ್ಟೆಬಲ್ ಕೂಡಲೇ ಹಿಂಪಡೆಯಬೇಕು. ತಪ್ಪಿತಸ್ಥ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.
ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ಗಮನಕ್ಕೆ ಬಾರದೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆಯೇ? ಹಾಗಿದ್ದರೆ ಅವರೊಬ್ಬ ದಕ್ಷ ಮಂತ್ರಿ. ಹಿಂದೂಗಳೆಲ್ಲ ಒಂದೇ ಎಂದು ಬಿಜೆಪಿ ಹೇಳುತ್ತಿದೆ. ಕೊರಗರು ಇದರಲ್ಲಿ ಸೇರಿಲ್ಲವೇ?” ಎಂದು ಅವರು ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.