ಬೆಂಗಳೂರು: ಉಡುಪಿ ಶ್ರೀ ಕೃಷ್ಣ ಮಠದ ಪೇಜಾವರ ಶ್ರೀಗಳ ವಿರುದ್ಧ ಹಂಸಲೇಖ ಅವರು ಅವಹೇಳನಕಾರಿಯಾಗಿ ಮಾತಾಡಿದ್ದು ಸಾಕಷ್ಟು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. ಸಾಕಷ್ಟು ಜನ ಇದರ ಕುರಿತು ದನಿ ಎತ್ತಿದ್ದಾರೆ. ಇದರ ಕುರಿತು ಬಿಗ್ಬಾಸ್ ನಲ್ಲಿ ಹಾಗೂ ರಾಜಾ ರಾಣಿ ಶೋ ನಲ್ಲಿ ಭಾಗವಹಿಸಿದ ಸಮೀರ್ ಆಚಾರ್ಯ ಪತ್ನಿ ಶ್ರಾವಣಿ ಸಮೀರ ಆಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ತಮಗೆ ಆದ ನೋವನ್ನು ಹೇಳಿದ್ದಾರೆ. ನಾನಿಲ್ಲಿ ಹೋಲಿಕೆ ಮಾಡಲು ಬಂದಿಲ್ಲ. ಹೋಲಿಕೆ ಮಾಡಲು ಸಾಧ್ಯವೂ ಇಲ್ಲ. ನೀವೆಲ್ಲಿ, ಅವರೆಲ್ಲಿ. ಪೇಜಾವರ ಶ್ರೀಗಳ ಪಾದದ ಧೂಳಿಗೂ ನೀವು ಸಮವಲ್ಲ. ನಮ್ಮ ಸ್ವಾಮಿಗಳು ನಿಮಗಿಂತ ದೊಡ್ಡವರು. ನಿಮಗಿನ್ನೂ 18 ವಯಸ್ಸು ಆಗಿರಲಿಲ್ಲ, ಆಗಲೇ ನಮ್ಮ ಸ್ವಾಮಿಗಳು ದಲಿತಕೇರಿ ಹೋಗಿ, ಅವರ ಕಷ್ಟ-ಸುಖಗಳನ್ನು ಕೇಳಿಕೊಂಡು, ಜಿಲ್ಲಾಧಿಕಾರಿಗಳ ಜತೆ ಮಾತನಾಡಿ ಪರಿಹಾರವನ್ನು ಒದಗಿಸಿಕೊಟ್ಟಿದ್ದರು. ಇದು ನಿಮಗೆ ಗೊತ್ತಿದೆಯೇ? ಆ ಸಮಯದಲ್ಲಿನ್ನೂ ಹಂಸಲೇಖ ಅನ್ನೋ ಹೆಸರು ಬೆಳಕಿಗೆ ಬಂದಿರಲಿಲ್ಲ ಎಂದು ಶ್ರಾವಣಿ ಅವರು ಗರಂ ಆಗಿದ್ದಾರೆ.
ರಾಷ್ಟ್ರ ಕಟ್ಟಿ ರಾಷ್ಟ್ರೀಯ ಸಂತ ಎಲ್ಲಿ, ನೀವೆಲ್ಲಿ. ಕೇವಲ ದಲಿತರಷ್ಟೇ ಅಲ್ಲ, ಮಾನವೀಯ ತಳಹದಿ ಒಳಗೆ ಎಲ್ಲಾ ಭಾರತೀಯರು ಒಂದೇ ಎಂದು ಹೇಳಿ ಮುಸಲ್ಮಾನರನ್ನು ಕರೆದು ಶ್ರೀಕೃಷ್ಣನ ಪ್ರಸಾದವನ್ನು ಕೊಟ್ಟವರು ನಮ್ಮ ಪೇಜಾವರ ಶ್ರೀಗಳು. ಹಂಸಲೇಖ ಅವರೇ ನೀವು ಎಷ್ಟು ಜನರ ಕಷ್ಟ-ಸುಖಗಳನ್ನು ಕೇಳಿದ್ದೀರಿ? ಎಷ್ಟು ಜನರಿಗಾಗಿ ನೀವು ಹೋರಾಟ ಮಾಡಿದ್ದೀರಿ? ಹೇಳಿ.
ಕೇವಲ ನಿಮ್ಮ ಸ್ವಾರ್ಥಕೋಸ್ಕರ ಹಾಡನ್ನು ಬರೆದು, ನಿಮ್ಮ ಸ್ವಾರ್ಥ ಜೀವನಕ್ಕಾಗಿ ಬದುಕುತ್ತಿದ್ದೀರಿ. ಹೀಗಿರುವಾಗ ವಿಶ್ವಮಾನವರಾದ ನಮ್ಮ ಸ್ವಾಮೀಗಳ ಬಗ್ಗೆ ಮಾತಾಡುವುದು ಸರಿಯಲ್ಲ.
ಅವರು ನಿಮ್ಮ ರೀತಿ ಸ್ವಾರ್ಥದ ಬದುಕು ಬದುಕಿದವರಲ್ಲ. ಅವರ ನಡೆ, ನುಡಿ ಮತ್ತು ಕೃತಿ ಪ್ರತಿಯೊಂದು ಕೂಡ ನಿಸ್ವಾರ್ಥವಾಗಿತ್ತು.ಎಷ್ಟು ದೊಡ್ಡ ಹಿರಿಯರು ನೀವು, ಸರಿಗಮಪ ಎಂಬ ಒಂದು ದೊಡ್ಡ ಶೋನಲ್ಲಿ ಮಹಾಗುರುಗಳು ಅಂತಾ ನಿಮ್ಮನ್ನು ಕರಿಯುತ್ತಾರೆ. ಮಹಾ ಬೇಡ ಗುರು ಅನ್ನೋ ಒಂದು ಪದದ ಅರ್ಥ ನೀವು ಆಡಿದ ಮಾತಿಗೆ ಸರಿ ಹೊಂದುವುದಿಲ್ಲ.
ಕೆಲವು ವರ್ಷಗಳ ಹಿಂದೆ ನಿಮ್ಮ ಜತೆ ನಾವು ಫೋಟೋ ತೆಗೆಸಿಕೊಂಡಿದ್ದೆವು. ಆದರೆ, ನಿಮ್ಮ ಮಾತಿನಿಂದ ನಮಗೆ ಬೇಜಾರಾಗಿದೆ. ಹೀಗಾಗಿ ನಾವು ನಿಮ್ಮ ಫೋಟೋವನ್ನು ಡಿಲೀಟ್ ಮಾಡಿದ್ದೇವೆ. ಅನೇಕ ಅಭಿಮಾನಿಗಳಿಗೂ ಕೂಡ ನಿಮ್ಮ ಮೇಲೆ ಅಸಮಾಧಾನ ಆಗಿರಬಹುದು. ನಮಗಂತೂ ಬಹಳ ನೋವಾಗಿದೆ. ನಿಮ್ಮಿಂದ ಈ ನಿರೀಕ್ಷೆ ಮಾಡಿರಲಿಲ್ಲ.
ತಕ್ಷಣ ನೀವು ವಿದ್ಯಾಪೀಠಕ್ಕೆ ಹೋಗಿ, ಶ್ರೀಗಳ ಬೃಂದಾವನ ಒಳಗೆ ತಪ್ಪಾಯ್ತು ಅಂತಾ ಕ್ಷಮೆ ಕೋರಿ ಎಂದು ಶ್ರಾವಣಿ ಹೇಳಿದ್ದಾರೆ. ಇನ್ನೊಮ್ಮೆ ನಮ್ಮ ಸ್ವಾಮಿಗಳ ಬಗ್ಗೆ ಏನಾದರೂ ಅಂದರೆ, ನಿಮ್ಮ ಮನೆಯ ಬಳಿ ಬಂದು ಹೋರಾಟ ಮಾಡಬೇಕಾಗುತ್ತದೆ ಎಂದು ಶ್ರಾವಣಿ ಎಚ್ಚರಿಕೆ ನೀಡಿದ್ದಾರೆ.