ಪುತ್ತೂರು : ಸರ್ಕಾರದ ಹೊಸ ಪರಿಷ್ಕೃತ ಮಾರ್ಗಸೂಚಿಯಂತೆ ಪುತ್ತೂರು ನಗರವು ಸೇರಿದಂತೆ ತಾಲೂಕಿನಲ್ಲಿ ಅವಶ್ಯಕ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಇತರ ಅಂಗಡಿಗಳನ್ನು ಬಂದ್ ಮಾಡಲಾಗಿದೆ.
ಪುತ್ತೂರಿನಲ್ಲಿ ದಿನಸಿ ಅಂಗಡಿಗಳು, ಹೊಟೇಲ್, ಹಾಲು, ತರಕಾರಿ, ಮೊಟ್ಟೆ, ಮೀನು, ಮಾಂಸ ಮಾರಾಟದ ಅಂಗಡಿಗಳನ್ನು ತೆರೆಯಲಾಗಿತ್ತು. ಇತರ ಯಾವುದೇ ವಾಣಿಜ್ಯ ವ್ಯವಹಾರಗಳಿಗೆ ಅವಕಾಶವಿರಲಿಲ್ಲ. ಚಿನ್ನಾಭರಣ, ಜವುಳಿ ಮಳಿಗೆ ಸೇರಿದಂತೆ ಇತರ ಗೂಡಂಗಡಿ, ಇನ್ನಿತರ ಸಣ್ಣ ಪುಟ್ಟ ಅಂಗಡಿಗಳನ್ನು ಹಾಗೂ ಫ್ಯಾನ್ಸಿ ಅಂಗಡಿಗಳನ್ನು ಮುಚ್ಚಲಾಗಿದೆ. ಸಹಕಾರಿ ಬ್ಯಾಂಕ್ ಗಳು, ರಾಷ್ಟ್ರೀಕೃತ ಬ್ಯಾಂಕ್ಗಳ ಶಾಖೆಗಳು ಹಾಗೂ ಸರಕಾರಿ ಕಚೇರಿಗಳು ಎಂದಿನಂತೆ ತೆರೆದಿದ್ದವು.
ಶನಿವಾರ ಮತ್ತು ಭಾನುವಾರ ಕರ್ಫ್ಯೂ ಆದೇಶ ಜಾರಿಯಲ್ಲಿರುವುದರಿಂದ ಬೆಳಗ್ಗಿನಿಂದ ರಾತ್ರಿ 9ರವರೆಗೆ ಮಾತ್ರ ಕೆಎಸ್ಆರ್ಟಿಸಿ ಬಸ್ಗಳ ಓಡಾಟ ವ್ಯವಸ್ಥೆಯನ್ನು ಮಾಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ರಾತ್ರಿ ತಂಗುವ ಎಲ್ಲಾ ಬಸ್ಗಳನ್ನು ಕರ್ಫ್ಯೂ ಹಿನ್ನೆಲೆಯಲ್ಲಿ ಓಡಾಟ ಸ್ಥಗಿತಗೊಳಿಸಲಾಗಿದೆ.
ಕೊರೋನ ಮುನ್ನೆಚರಿಕೆ ಕ್ರಮಗಳಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಪಾಲನೆಗಾಗಿ ಪೊಲೀಸ್ ಮತ್ತು ಕಂದಾಯ ಇಲಾಖೆ ನೇರ ಕಾರ್ಯಾಚರಣೆ ನಡೆಸುತ್ತಿದೆ. ಎಲ್ಲಿಯೂ ಜನಸಂದಣಿ ಸೇರದಂತೆ ಪೊಲೀಸರು ತಡೆಯುತ್ತಿದ್ದಾರೆ. ಈ ಕುರಿತಂತೆ ಪೊಲೀಸರು ಮತ್ತು ನಗರಸಭೆಯವರು ಧ್ವನಿವರ್ದಕದ ಮೂಲಕ ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದರು.