ಬೆಳ್ತಂಗಡಿ: ಶಿಬಾಜೆಯಲ್ಲಿ ದಲಿತ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪ್ರಕರಣದ ತನಿಖಾಧಿಕಾರಿಯಾಗಿರುವ ಬಂಟ್ವಾಳ ಡಿವೈಎಸ್ಪಿ ಪ್ರತಾಪ್ ಸಿಂಗ್ ಥೋರಾಟ್ ನೇತೃತ್ವದಲ್ಲಿ ಬಂಧಿಸಲಾಗಿದೆ. ಆದ್ರೆ ಬಂಧನ ಮಾಡಿ ವಾರ ಕಳೆದರೂ ಈ ವರೆಗೂ ನಾಲ್ಕು ಜನರ ಬಂಧನದ ಕುರಿತು ಪತ್ರಿಕಾ ಪ್ರಕಟಣೆಯನ್ನು ನೀಡದೆ ಸೈಲೆಂಟ್ ಅಗಿರುವ ಖಾಕಿ ಪಡೆ.
ಕೊಲೆ ಪ್ರಕರಣ ಸಂಬಂಧಿಸಿದಂತೆ ಆರೋಪಿಗಳಾದ ಶಿಬಾಜೆ ನಿವಾಸಿಗಳಾಗಿರುವ ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ, ಆನಂದ ಗೌಡ , ಮಹೇಶ್ ಪೂಜಾರಿಯನ್ನು ಬಂಟ್ವಾಳ ಡಿವೈಎಸ್ಪಿ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಸಾರಾ ಫಾರ್ಮ್ ನಲ್ಲಿ ಕೆಲಸ ಮಾಡುತ್ತಿದ್ದ ಮೂಡಿಗೆರೆ ಮೂಲದ ದಲಿತ ಯುವಕ ಶ್ರೀಧರ (30) ಎಂಬತನನ್ನು ಕಳೆದ ಡಿಸೆಂಬರ್ 18 ರಂದು ಬೆಳಗ್ಗೆ ಕೆಲಸ ಮಾಡುವ ತೋಟದಲ್ಲಿ ಕೊಲೆ ಮಾಡಿ ಬೆತ್ತಾಲೆಗೊಳಿಸಿ ಬಿಸಾಕಿ ಹಣವನ್ನು ದರೋಡೆ ಮಾಡಿ ಹೋಗಿದ್ದರು ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಡಿಸೆಂಬರ್ 17ರಂದು ನಾಲ್ಕು ಜನ ಆರೋಪಿಗಳು ಸೇರಿ ಶ್ರೀಧರ್ ಮೇಲೆ ಹಲ್ಲೆ ನಡೆಸಿದ್ದು ಕೆಲಸದವರಿಬ್ಬರು ಶ್ರೀಧರನನ್ನು ರಕ್ಷಿಸಿದ್ದರು.ಇದು ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆ ಎಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನಾಲ್ವರು ಆರೋಪಿಗಳ ವಿರುದ್ದ ಕೊಲೆ ಹಾಗೂ ದರೋಡೆ , ದಲಿತ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣ ಸಂಬಂಧ ನಾಲ್ಕು ಆರೋಪಿಗಳನ್ನು ಬಂಧನ ಮಾಡಿ ಒಂದು ವಾರ ಕಳೆದರೂ ಈ ಕುರಿತು ಬಂಟ್ವಾಳ ಡಿವೈಎಸ್ಪಿ ಪ್ರತಾಪ್ ಸಿಂಗ್ ಥೋರಾಟ್ ಕಚೇರಿಯಿಂದ ಅಥವಾ ಎಸ್ಪಿ ಕಚೇರಿಯಿಂದ ಈವರೆಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡದೆ ಸೈಲೆಂಟ್ ಅಗಿರುವುದು ಮಾತ್ರ ಹಲವು ಅನುಮಾನಕ್ಕೆ ಕಾರಣವಾಗಿದೆ.