ಬೆಳ್ತಂಗಡಿ: ಕೋಟಾ ಪೋಲಿಸ್ ಠಾಣೆ ವ್ಯಾಪ್ತಿಯ ಕೊರಗ ಕಾಲನಿಯಲ್ಲಿ ನಡೆದ ಪೋಲಿಸ್ ದೌರ್ಜನ್ಯದ ಸಂತ್ರಸ್ತ ಕೊರಗ ಸಮುದಾಯದ ಮೇಲೆ ಮತ್ತೆ ಜಾಮೀನು ರಹಿತ ಕ್ರಿಮಿನಲ್ ಕೇಸ್ ದಾಖಲಿಸುವ ಮೂಲಕ ರಾಜ್ಯದ ಬಿಜೆಪಿ ಸರ್ಕಾರ ತನ್ನ ನಿಜರೂಪವನ್ನು ಬಹಿರಂಗ ಪಡಿಸಿದೆ. ಆದರೂ ಹಿಂದೂ ನಾವೆಲ್ಲ ಒಂದು ಎನ್ನುವ ಸಂಘಪರಿವಾರ ನರಸತ್ತವರಂತೆ ವರ್ತಿಸುತ್ತಿದೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಕೊರಗ ಸಮುದಾಯದ ಮೇಲಿನ ದೌರ್ಜನ್ಯವನ್ನು ಖಂಡಿಸಿ , ಕೊರಗ ಸಮುದಾಯದ ಮದುವೆ , ವರನ ಮನೆಗೆ ಜಿಲ್ಲಾಧಿಕಾರಿ , ಎಸ್ಪಿಯವರ ಜೊತೆಗೆ ರಾಜ್ಯದ ಸಮಾಜ ಕಲ್ಯಾಣ ಸಚಿವರು ಭೇಟಿ ನೀಡಿದ ಮರುದಿನವೇ ಕೊರಗ ಸಮುದಾಯದ ಮೇಲೆ ಕೇಸ್ ದಾಖಲಿಸಲಾಗಿದೆ ಎಂದರೆ ಕೋಟಾ ಶ್ರೀನಿವಾಸ ಪೂಜಾರಿರವರಿಗೆ ಅಧಿಕಾರಿಗಳ ಮೇಲೆ ಹಿಡಿತ ಇಲ್ಲವೇ ? ಕೊರಗ ಕಾಲನಿಯಲ್ಲಿ ಮೊಸಲೆ ಕಣ್ಣೀರು ಹಾಕಿ ರಾಜ್ಯ ಸರ್ಕಾರ ಕೊರಗ ಸಮುದಾಯದ ಪರವಾಗಿ ನಿಲ್ಲುತ್ತದೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ ಬಳಿಕ ಕೋಟಾ ಪೋಲಿಸರು ಕೇಸ್ ದಾಖಲಿಸುತ್ತಾರೆ ಎಂದರೆ ಕೋಟಾ ಪೋಲಿಸ್ ಠಾಣೆ ಪಾಕಿಸ್ಥಾನ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಮಿತಿ ಸದಸ್ಯ ಶೇಖರ್ ಲಾಯಿಲ ಪ್ರಶ್ನಿಸಿದ್ದಾರೆ. ಉಡುಪಿ ಜಿಲ್ಲೆಯ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸೇರಿದಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪೋಲಿಸ್ ದೌರ್ಜನ್ಯದ ವಿರುದ್ಧ ನೀಡಿದ ಹೇಳಿಕೆಗಳು ಕೇವಲ ಬೂಟಾಟಿಕೆಯೇ ? ಒಂದು ಪೋಲಿಸ್ ಠಾಣೆಯನ್ನು ಕಂಟ್ರೋಲ್ ನಲ್ಲಿ ಇಡಲು ಸಾಧ್ಯವಿಲ್ಲದ ಜನಪ್ರತಿನಿಧಿಗಳು ಇದ್ದು ಸತ್ತಂತೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಈ ಘಟನೆ ಉತ್ತಮ ಉದಾಹರಣೆ ಎಂದಿರುವ ಶೇಖರ್ ಲಾಯಿಲ , ಇಡೀ ಪ್ರಕರಣ ಜೈಭೀಮ್ ಸಿನಿಮಾದ ಘಟನೆಯನ್ನು ಮತ್ತೆ ನೆನಪಿಸುವಂತಿದೆ ಎಂದು ಹೇಳಿದ್ದಾರೆ. ಗೃಹ ಸಚಿವ ಅರಗ ಜ್ಞಾನೇಂದ್ರ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು. ಸಂತ್ರಸ್ತ ಪ್ರತಿ ಕುಟುಂಬಕ್ಕೆ 2 ಲಕ್ಷ ರೂಪಾಯಿ ಘೋಷಣೆ ಮುಂಗೈಗೆ ಬೆಲ್ಲ ಸವರುವ ಕೆಲಸ ಎಂದು ಟೀಕಿಸಿದ್ದಾರೆ.
ಜನವರಿ 4 ರಂದು ಬೆಳ್ತಂಗಡಿಯಲ್ಲಿ ಪ್ರತಿಭಟನೆ : ಕೋಟಾ ಘಟನೆಯಲ್ಲಿ ಸರ್ಕಾರದ ನಿರ್ಲಕ್ಷ್ಯವನ್ನು ಪ್ರತಿಭಟಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ , ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ ) , ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ) , ದಲಿತ ಹಕ್ಕುಗಳ ಸಮಿತಿ , ಡಿವೈಎಫ್ಐ ಸೇರಿದಂತೆ ಹಲವಾರು ಸಂಘಗಳ ನೇತೃತ್ವದಲ್ಲಿ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಶೇಖರ್ ಲಾಯಿಲ ತಿಳಿಸಿದ್ದಾರೆ.