ಬಂಟ್ವಾಳ: ಇಲ್ಲಿನ ಫರಂಗಿಪೇಟೆ ಕಿದೆಬೆಟ್ಟಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ದಿಗಂತ್ ನಾಪತ್ತೆಯಾಗಿ ಇಂದಿಗೆ11 ದಿನಗಳಾದರೂ ಆತನ ಪತ್ತೆ ಯಾಗಿಲ್ಲ, ಪೊಲೀಸರು ಸಮರ್ಪಕ ತನಿಖೆ ನಡೆಸಿಲ್ಲ ಎಂದು ಆರೋಪಿಸಿ ಕುಟುಂಬಸ್ಥರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಅಮೂಲ್ಯ ಸಮಯದಲ್ಲಿ ತನಿಖೆ ನಡೆಯದ್ದಿದರಿಂದ ದಿಗಂತ್ನ ಪತ್ತೆ ಸಾಧ್ಯವಾಗಿಲ್ಲ ಎಂದು ಮಂಗಳೂರಿನ ನ್ಯಾಯವಾದಿಗಳು ಆತನ ತಂದೆಯ ಪರ ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ನ್ಯಾಯವಾದಿಗಳಾದ ಸಚಿನ್ ನಾಯಕ್, ಅಕ್ಷಯ್ ಆಳ್ವ ಹಾಗೂ ಅಖೀಲೇಶ್ವರಿ ಅವರ ಅರ್ಜಿಯು ಗುರುವಾರ ನ್ಯಾಯಮೂರ್ತಿಗಳಾದ ಜ| ಕಾಮೇಶ್ವರ ರಾವ್ ಹಾಗೂ ಜ| ಟಿ.ಎಂ. ನಡಾಫ್ ಅವರಿದ್ದ ಹೈಕೋರ್ಟ್ನ ದ್ವಿಸದಸ್ಯ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆದಿದ್ದು, ಅರ್ಜಿದಾರರ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳು ಮಾ. 12ರೊಳಗೆ ತನಿಖಾ ವರದಿಯನ್ನು ಹೈಕೋರ್ಟ್ಗೆ ಸಲ್ಲಿಸುವಂತೆ ದ.ಕ. ಜಿಲ್ಲಾ ಪೊಲೀಸರಿಗೆ ಆದೇಶಿಸಿದ್ದಾರೆ.
ಈ ಪ್ರಕರಣದ ಕುರಿತಂತೆ ಮಾ. 13ರಂದು ಮುಂದಿನ ವಿಚಾರಣೆ ನಡೆಯಲಿದೆ.